[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 10ನೇ ಡಿಸೆಂಬರ್ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸಂವಿಧಾನ ಸಭೆಯ ಪ್ರಥಮ ಅಧಿವೇಶನಕ್ಕೆ 75 ವರ್ಷಗಳು.

2. ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಚಂಡಮಾರುತಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. CBI ಮತ್ತು ED ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸಲು ಮಸೂದೆಗಳು.

2. ಪೌರತ್ವ (ತಿದ್ದುಪಡಿ) ಕಾಯಿದೆ, 2019.

3. ಹಕ್ಕಿ ಜ್ವರ.

4. ವಿಶ್ವ ಚಿನ್ನ ಮಂಡಳಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ನ್ಯೂಜಿಲೆಂಡ್‌ ನ ಜೀವಮಾನ ನಿಷೇಧ.

2. ಜ್ಞಾನಪೀಠ ಪ್ರಶಸ್ತಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.

ಸಂವಿಧಾನ ಸಭೆಯ ಪ್ರಥಮ ಅಧಿವೇಶನಕ್ಕೆ 75 ವರ್ಷಗಳು:


(75 yrs of Constituent Assembly’s 1st sitting)

ಸಂದರ್ಭ:

ಭಾರತದ ಸಂವಿಧಾನ ರಚನಾ ಸಭೆ (Constituent Assembly) ಯ ಮೊದಲ ಸಭೆ 75 ವರ್ಷಗಳ ಹಿಂದೆ 9 ಡಿಸೆಂಬರ್ 1946 ರಂದು ನಡೆಯಿತು.

  1. ಸಂವಿಧಾನ ರಚನಾ ಸಭೆಯಲ್ಲಿ, ಭಾರತದ ವಿವಿಧ ಭಾಗಗಳ ವಿಭಿನ್ನ ಹಿನ್ನೆಲೆಗಳು ಮತ್ತು ವಿಭಿನ್ನ ಸಿದ್ಧಾಂತಗಳನ್ನು, ಹೊಂದಿದ್ದ ಗಣ್ಯ ವ್ಯಕ್ತಿಗಳು, ಭಾರತದ ಜನರಿಗೆ ಸೂಕ್ತವಾದ ಸಂವಿಧಾನವನ್ನು ಒದಗಿಸುವ ಉದ್ದೇಶದಿಂದ ಒಗ್ಗೂಡಿದರು.

current affairs

 

ಭಾರತದ ಸಂವಿಧಾನ ಸಭೆಯ ಬಗ್ಗೆ ಪ್ರಮುಖ ಸಂಗತಿಗಳು:

  1. ಸಂವಿಧಾನ ಸಭೆಯ ಕಲ್ಪನೆಯನ್ನು ಮೊದಲು ಪರಿಚಯಿಸಿದವರು ‘ಎಂ ಎನ್ ರಾಯ್’ ಅವರು.
  2. 1935 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಮೊದಲ ಬಾರಿಗೆ ಭಾರತಕ್ಕೆ ಅಧಿಕೃತವಾಗಿ ಸಂವಿಧಾನವನ್ನು ರೂಪಿಸಲು ಒಂದು ಸಂವಿಧಾನ ರಚನಾ ಸಭೆಯನ್ನು ರೂಪಿಸಲು ಕರೆ ನೀಡಿತು.
  3. 1938 ರಲ್ಲಿ, ಜವಾಹರಲಾಲ್ ನೆಹರು ಅವರು ಸಂವಿಧಾನದ ಬಗ್ಗೆ ‘ಸ್ವತಂತ್ರ ಭಾರತದ ಸಂವಿಧಾನವನ್ನು ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ, ವಯಸ್ಕ ಮತದಾನದ ಆಧಾರದ ಮೇಲೆ ಚುನಾಯಿತವಾದ ಸಂವಿಧಾನ ರಚನಾ ಸಭೆಯಿಂದ ರಚಿಸಬೇಕು’ ಎಂದು ಬಲವಾದ ಹೇಳಿಕೆ ನೀಡಿದರು.
  4. ಸಂವಿಧಾನ ರಚನಾ ಸಭೆಯ ಬೇಡಿಕೆಯನ್ನು ಮೊದಲು ಬ್ರಿಟಿಷ್ ಸರ್ಕಾರವು 1940 ರ ಆಗಸ್ಟ್ ಕೊಡುಗೆಯ ಮೂಲಕ ಅಂಗೀಕರಿಸಿತು.
  5. ಅಂತಿಮವಾಗಿ, ‘ಕ್ಯಾಬಿನೆಟ್ ಮಿಷನ್ ಯೋಜನೆಯ ನಿಬಂಧನೆಗಳ ಅಡಿಯಲ್ಲಿ, 1946 ರಲ್ಲಿ ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲಾಯಿತು.

ಸಂವಿಧಾನ ಸಭೆಗೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳು:

  1. ಸಂವಿಧಾನ ರಚನಾ ಸಭೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆ: 389
  2. ಬ್ರಿಟಿಷ್ ಇಂಡಿಯಾಕ್ಕೆ 296 ಸ್ಥಾನಗಳು ಮತ್ತು ರಾಜಪ್ರಭುತ್ವದ ಸಂಸ್ಥಾನಗಳಿಗೆ 93 ಸ್ಥಾನಗಳ ಹಂಚಿಕೆ.
  3. ಬ್ರಿಟಿಷ್ ಇಂಡಿಯಾಗೆ ಹಂಚಿಕೆಯಾದ 296 ಸ್ಥಾನಗಳಲ್ಲಿ, ಹನ್ನೊಂದು ಗವರ್ನರ್ ಆಳ್ವಿಕೆಯ ಪ್ರಾಂತ್ಯಗಳಿಂದ 292 ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು ಮತ್ತು ನಾಲ್ಕು ಸದಸ್ಯರನ್ನು ‘ಮುಖ್ಯ ಕಮಿಷನರ್’ ಆಳ್ವಿಕೆಯ ಪ್ರಾಂತ್ಯಗಳಿಂದ ಆಯ್ಕೆ ಮಾಡಬೇಕಾಗಿತ್ತು.
  4. ಆಯಾ ಪ್ರಾಂತ್ಯಗಳ ಜನಸಂಖ್ಯೆಯ ಅನುಪಾತದ ಆಧಾರದ ಮೇಲೆ ಸೀಟುಗಳ ಹಂಚಿಕೆ ಮಾಡಲಾಗಿತ್ತು.
  5. ಪ್ರತಿ ಬ್ರಿಟಿಷ್ ಪ್ರಾಂತ್ಯಕ್ಕೆ ನೀಡಲಾದ ಸ್ಥಾನಗಳನ್ನು ಮೂರು ಪ್ರಮುಖ ಸಮುದಾಯಗಳಲ್ಲಿ-ಮುಸ್ಲಿಮರು, ಸಿಖ್ಖರು ಮತ್ತು ಸಾಮಾನ್ಯ ವರ್ಗದವರಲ್ಲಿ ನಿರ್ಧರಿಸಬೇಕಿತ್ತು.
  6. ಪ್ರತಿ ಸಮುದಾಯದ ಪ್ರತಿನಿಧಿಗಳನ್ನು ಆ ಸಮುದಾಯದ ಸದಸ್ಯರು ಪ್ರಾಂತೀಯ ಅಸೆಂಬ್ಲಿಯಲ್ಲಿ ಚುನಾಯಿಸಬೇಕಾಗಿತ್ತು ಮತ್ತು ವರ್ಗಾವಣೆ ಮಾಡಬಹುದಾದ ಏಕ ಮತದ ಮೂಲಕ ಪ್ರಮಾಣಾನುಗುಣವಾದ ಪ್ರಾತಿನಿಧ್ಯದ ವಿಧಾನದಿಂದ ಮತ ಚಲಾಯಿಸಬೇಕಿತ್ತು.
  7. ರಾಜಪ್ರಭುತ್ವದ ರಾಜ್ಯಗಳ ಪ್ರತಿನಿಧಿಗಳನ್ನು ಈ ರಾಜಪ್ರಭುತ್ವದ ಮುಖ್ಯಸ್ಥರು ನಾಮನಿರ್ದೇಶನ ಮಾಡಬೇಕಿತ್ತು.

ಸಂವಿಧಾನ ಸಭೆಯ ಸಂಯೋಜನೆಯ ಬಗ್ಗೆ ಸಂಕ್ಷಿಪ್ತ ಅವಲೋಕನ:

  1. ಸಂವಿಧಾನ ರಚನಾ ಸಭೆಯು ಭಾಗಶಃ ಚುನಾಯಿತ ಮತ್ತು ಭಾಗಶಃ ನಾಮನಿರ್ದೇಶಿತ ಸಂಸ್ಥೆಯಾಗಿತ್ತು.
  2. ಸೀಮಿತ ಫ್ರಾಂಚೈಸಿ ಆಧಾರದ ಮೇಲೆ ಚುನಾಯಿತರಾದ ಪ್ರಾಂತೀಯ ಶಾಸಕಾಂಗದ ಸದಸ್ಯರು ಪರೋಕ್ಷವಾಗಿ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು.
  3. ಸಂವಿಧಾನ ಸಭೆಯು ಭಾರತದ ವಯಸ್ಕ ಮತದಾರರಿಂದ ನೇರವಾಗಿ ಚುನಾಯಿತವಾಗದಿದ್ದರೂ, ಅದು ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಗಳನ್ನು ಒಳಗೊಂಡಿತ್ತು.
  4. ಸಂವಿಧಾನ ರಚನಾ ಸಭೆಯ ಮೊದಲ ಸಭೆಯಲ್ಲಿ ಮುಸ್ಲಿಂ ಲೀಗ್ ಭಾಗವಹಿಸಿರಲಿಲ್ಲ.
  5. ಸಂವಿಧಾನ ರಚನಾ ಸಭೆಯು ಎರಡು ವರ್ಷ, 11 ತಿಂಗಳು ಮತ್ತು 18 ದಿನಗಳ ಅವಧಿಯಲ್ಲಿ 11 ಅಧಿವೇಶನಗಳನ್ನು ನಡೆಸಿತು ಅಥವಾ ಹನ್ನೊಂದು ಬಾರಿ ಸಭೆ ಸೇರಿತು.
  6. ಸಂವಿಧಾನ ರಚನಾ ಸಭೆಯ ಕೊನೆಯ ಅಧಿವೇಶನವು 24 ಜನವರಿ 1950 ರಂದು ನಡೆಯಿತು.

ಹೊಸ ಶಾಸಕಾಂಗ ರಚನೆಯಾಗುವವರೆಗೂ ಸಂವಿಧಾನ ರಚನಾ ಸಭೆಯು ‘ತಾತ್ಕಾಲಿಕ ಶಾಸಕಾಂಗ’ವಾಗಿ ಕಾರ್ಯನಿರ್ವಹಿಸಿತು. ಈ ಅವಧಿಯಲ್ಲಿ ಸಂವಿಧಾನ ಸಭೆಯು ಮಾಡಿದ ಕೆಲವು ಪ್ರಮುಖ ಕೆಲಸಗಳು ಈ ಕೆಳಗಿನಂತಿವೆ:

  1. ಮೇ 1949 ರಲ್ಲಿ ಕಾಮನ್‌ವೆಲ್ತ್‌ನಲ್ಲಿ ಭಾರತದ ಸದಸ್ಯತ್ವದ ಅಂಗೀಕಾರ.
  2. ಇದು 22 ಜುಲೈ 1947 ರಂದು ರಾಷ್ಟ್ರಧ್ವಜವನ್ನು ಅಂಗೀಕರಿಸಿತು.
  3. ಇದು 24 ಜನವರಿ 1950 ರಂದು ರಾಷ್ಟ್ರಗೀತೆಯನ್ನು ಅಂಗೀಕರಿಸಿತು.
  4. ರಾಷ್ಟ್ರಹಾಡನ್ನು ಜನವರಿ 24, 1950 ರಂದು ಅಂಗೀಕರಿಸಲಾಯಿತು.
  5. 24 ಜನವರಿ 1950 ರಂದು, ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಿ ಆಯ್ಕೆಯಾದರು.

ಸಂವಿಧಾನ ರಚನಾ ಸಭೆಯ ವಿರುದ್ಧದ ಟೀಕೆ:

  1. ಸದಸ್ಯರು ನೇರವಾಗಿ ಚುನಾಯಿತರಾಗದ ಕಾರಣ ಸಂವಿಧಾನ ಸಭೆಯು ಜನರ ಪ್ರಾತಿನಿಧಿಕ ಸಂಸ್ಥೆಯಾಗಿರಲಿಲ್ಲ.
  2. ಇದು ಬ್ರಿಟಿಷರ ಆದೇಶಗಳ ಆಧಾರದ ಮೇಲೆ ರಚಿತವಾದ ಕಾರಣ ಅದು ‘ಸಾರ್ವಭೌಮ ಸಂಸ್ಥೆ’ಯಾಗಿರಲಿಲ್ಲ.
  3. ಸಂವಿಧಾನವನ್ನು ರಚಿಸಲು ಅನಾವಶ್ಯಕವಾಗಿ ಬಹಳ ಸಮಯ ತೆಗೆದುಕೊಂಡಿತು.
  4. ಅದರ ಸದಸ್ಯರು ಮುಖ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾದ್ದರಿಂದ ಅಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿತ್ತು.
  5. ಇದರಲ್ಲಿ ವಕೀಲ-ರಾಜಕಾರಣಿಗಳ ಪ್ರಾಬಲ್ಯ ಬಹಳ ಹೆಚ್ಚಾಗಿತ್ತು.
  6. ಇದು ಪ್ರಧಾನವಾಗಿ ಹಿಂದೂಗಳ ಪ್ರಾಬಲ್ಯವನ್ನು ಹೊಂದಿತ್ತು.

 

ವಿಷಯಗಳು:ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಚಂಡಮಾರುತಗಳು:


(More Cyclones in Arabian Sea)

ಸಂದರ್ಭ:

1891 ರಿಂದ 2020 ರ ಅವಧಿಯಲ್ಲಿ ಉತ್ತರ ಹಿಂದೂ ಮಹಾಸಾಗರದಲ್ಲಿ (ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರ) ಚಂಡಮಾರುತಗಳ (Cyclones) ಹಿಂದಿನ ಮಾಹಿತಿಯ ವಿಶ್ಲೇಷಣೆಯು ಇದನ್ನು ಸೂಚಿಸುತ್ತದೆ,ಅದು ಏನೆಂದರೆ:

  1. ಇತ್ತೀಚಿನ ವರ್ಷಗಳಲ್ಲಿ, ಅರೇಬಿಯನ್ ಸಮುದ್ರದ ಮೇಲೆ ಬಹಳ ತೀವ್ರವಾದ ಚಂಡಮಾರುತದ”(Very Severe Cyclonic Storms) ಆವರ್ತನದಲ್ಲಿ ಹೆಚ್ಚಳ ಕಂಡುಬಂದಿದೆ. ಆದಾಗ್ಯೂ, ಈ ಚಂಡಮಾರುತಗಳಲ್ಲಿ ಹೆಚ್ಚಿನವು ಓಮನ್ ಮತ್ತು ಯೆಮೆನ್ ದೇಶಗಳ ಭೂಪ್ರದೇಶದ ಭಾಗಗಳಲ್ಲಿ ಭೂಸ್ಪರ್ಶ ಮಾಡುತ್ತಿದ್ದರಿಂದ ಅವು ಭಾರತದ ಪಶ್ಚಿಮ ಕರಾವಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡಲಿಲ್ಲ.
  2. ಭಾರತದ ಪೂರ್ವ ಕರಾವಳಿಯು ಪಶ್ಚಿಮ ಕರಾವಳಿಗಿಂತ “ಅತ್ಯಂತ ತೀವ್ರವಾದ ಚಂಡಮಾರುತಗಳಿಗೆ” ಹೆಚ್ಚು ತುತ್ತಾಗುತ್ತದೆ, ಆದರೆ ತೀವ್ರತರವಾದ ಸೈಕ್ಲೋನಿಕ್ ಸ್ಟಾರ್ಮ್ಸ್ ಅಥವಾ ಅತ್ಯಂತ ಗಂಭೀರವಾದ ಚಂಡಮಾರುತಗಳ (Extremely Severe Cyclonic Storms – ESCS) ಆವರ್ತನದಲ್ಲಿ ಇನ್ನೂ “ಯಾವುದೇ ಗಮನಾರ್ಹ ಪ್ರವೃತ್ತಿ” ಕಂಡುಬಂದಿಲ್ಲ.
  3. ಭೂ ವಿಜ್ಞಾನ ಸಚಿವಾಲಯದ (MoES) ಅಡಿಯಲ್ಲಿ ‘ಭಾರತೀಯ ಹವಾಮಾನ ಇಲಾಖೆ’ (IMD) ಯ ‘ ಮುಂಜಾಗೃತಾ ಎಚ್ಚರಿಕೆ ಕೌಶಲ್ಯಗಳ’ ಸುಧಾರಣೆಯ ಪರಿಣಾಮವಾಗಿ, ಚಂಡಮಾರುತಗಳಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
  4. ಪರಿಣಾಮಕಾರಿ ತಗ್ಗಿಸುವಿಕೆ ಕ್ರಮಗಳು ಮತ್ತು ಪ್ರತಿಕ್ರಿಯೆ ಕಾರ್ಯಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (MHA)ಗಳು ಸುಧಾರಿಸಿದೆ.

ಇದಕ್ಕೆ ಕಾರಣವಾಗಿರುವ ಅಂಶಗಳು:

  1. ಕಳೆದ ಶತಮಾನದಲ್ಲಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ, ಅರಬ್ಬಿ ಸಮುದ್ರದ ಮೇಲ್ಮೈ ತಾಪಮಾನವು ವೇಗವಾಗಿ ಹೆಚ್ಚಾಗಿದೆ. ಪ್ರಸ್ತುತ, ಅರೇಬಿಯನ್ ಸಮುದ್ರದ ಮೇಲ್ಮೈ ತಾಪಮಾನವು ನಾಲ್ಕು ದಶಕಗಳ ಹಿಂದಿನ ತಾಪಮಾನಕ್ಕಿಂತ 1.2-1.4 ° C ಹೆಚ್ಚಾಗಿದೆ. ಹೀಗೆ ಈ ಬೆಚ್ಚಗಿನ ತಾಪಮಾನವು,‘ಸಂವಹನ ಪ್ರಕ್ರಿಯೆಯಲ್ಲಿ’ ತೀವ್ರತೆ, ಭಾರೀ ಮಳೆ ಮತ್ತು ತೀವ್ರ ಚಂಡಮಾರುತಗಳ ರಚನೆಗೆ ಕೊಡುಗೆ ನೀಡುತ್ತದೆ.
  2. ಏರುತ್ತಿರುವ ತಾಪಮಾನವು, ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತಗಳ ತೀವ್ರತೆಯು ಬೆಳೆಯಲು, ಸಾಕಷ್ಟು ಶಕ್ತಿಯನ್ನು ಪೂರೈಸಲು ಅನುವುಮಾಡಿಕೊಡುತ್ತದೆ.
  3. ಅರೇಬಿಯನ್ ಸಮುದ್ರವು ಚಂಡಮಾರುತಗಳಿಗೆ ಅನುಕೂಲಕರವಾದ ಗಾಳಿಯ ಕತ್ತರಿಯನ್ನು (wind shear) ಒದಗಿಸುತ್ತದೆ. ಉದಾಹರಣೆಗೆ, ಉನ್ನತ ಮಟ್ಟದ ಪೂರ್ವ ಮಾರುತಗಳಿಂದ ಕೂಡಿದ, ಓಖಿ ಚಂಡಮಾರುತವು ಬಂಗಾಳ ಕೊಲ್ಲಿಯಿಂದ ಕಡಿಮೆ ಒತ್ತಡದ ಪ್ರದೇಶವಾದ ಅರಬ್ಬಿ ಸಮುದ್ರದ ಕಡೆಗೆ ಚಲಿಸಿತು.

ಪ್ರಮುಖ ಬದಲಾವಣೆಗಳು:

  1. 2001 ಮತ್ತು 2019 ರ ನಡುವೆ, ಅರಬ್ಬಿ ಸಮುದ್ರದ ಮೇಲೆ ಬೆಳೆಯುತ್ತಿರುವ ಚಂಡಮಾರುತಗಳ ಆವರ್ತನದಲ್ಲಿ 52% ಹೆಚ್ಚಳ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಆವರ್ತನದಲ್ಲಿ 8% ಇಳಿಕೆ ಕಂಡುಬಂದಿದೆ.
  2. ಕಳೆದ ಎರಡು ದಶಕಗಳಲ್ಲಿ, ಅರೇಬಿಯನ್ ಸಮುದ್ರದಲ್ಲಿ ಅತ್ಯಂತ ತೀವ್ರವಾದ ಚಂಡಮಾರುತಗಳ ಸಂಖ್ಯೆ 150% ರಷ್ಟು ಹೆಚ್ಚಾಗಿದೆ.

ಪ್ರಸ್ತುತ ಕಳವಳಗಳು:

ಒಂದು ವೇಳೆ ಈ ಪ್ರವೃತ್ತಿಯು ವರ್ಷಗಳ ಕಾಲ ಹೀಗೆ ಮುಂದುವರಿದರೆ, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ವಿಪತ್ತುಗಳು ಹೆಚ್ಚಾಗುವ ಅಪಾಯವನ್ನು ಒತ್ತಿಹೇಳುತ್ತದೆ.

ಚಂಡಮಾರುತ ಎಂದರೇನು?

ಚಂಡಮಾರುತಗಳು ವಾಯುಮಂಡಲದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆಯನ್ನು ಚಂಡಮಾರುತ ಎಂದು ಕರೆಯಲಾಗುತ್ತದೆ.

ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುತ್ತದೆ. ದಕ್ಷಿಣ ಗೋಳದಲ್ಲಿ ಚಂಡಮಾರುತ ಗಡಿಯಾರದ ದಿಕ್ಕಿನಲ್ಲಿ ಸುತ್ತುತ್ತದೆ. ಕಡಿಮೆ ವಾಯುಭಾರ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ದೊಡ್ಡ ಪ್ರಮಾಣದ ಚಂಡಮಾರುತಗಳೇಳುತ್ತವೆ.

ಅರಬ್ಬಿ ಸಮುದ್ರದ ಭೌಗೋಳಿಕ ಸ್ಥಾನ:

  1. ಅರಬ್ಬಿ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಇದರ ಹಳೆ ಹೆಸರು ಎರಿಥ್ರಿಯನ್‌ ಸಮುದ್ರ. ಈ ಭಾಗದಲ್ಲಿ ಅರಬ್ಬರ ವ್ಯವಹಾರ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬಿ ಸಮುದ್ರವೆಂದು ಕರೆಯಲಾಯಿತು. ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್‌ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ.
  2. ಅಕ್ಟೋಬರ್‌ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತಗಳು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತಗಳುನ ಇಲ್ಲಿ ಬೀಸುತ್ತವೆ. 1869ರಲ್ಲಿ ಸೂಯೆಜ್‌ ಕಾಲುವೆ ತೆರೆದ ನಂತರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತಗಳು ಹೆಚ್ಚಿದೆ.

ಹವಾಮಾನ ಬದಲಾವಣೆಯಿಂದ ಅರಬ್ಬಿ ಸಮುದ್ರದಲ್ಲಿ ಕೋಲಾಹಲ?

  1. ಸಾಮಾನ್ಯವಾಗಿ ಅರಬ್ಬಿ ಸಮುದ್ರಕ್ಕಿಂತ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಹೆಚ್ಚು. ಭಾರತದಲ್ಲಿ ಕಳೆದ 126 ವರ್ಷಗಳಿಂದ ಅಪ್ಪಳಿಸಿರುವ ಚಂಡಮಾರುತಗಳನ್ನು ನೋಡುವುದಾದರೆ 1891-2017ರ ವರೆಗೆ ಅಪ್ಪಳಿಸಿರುವ 305 ಚಂಡಮಾರುಗಳು ಅತಿ ಹೆಚ್ಚು ಹಾನಿಯುಂಟುಮಾಡಿವೆ. ಅದರಲ್ಲಿ 75% ಮಾರುಗಳು ಬಂಗಾಳಕೊಲ್ಲಿಯಿಂದ ಅಪ್ಪಳಿಸಿದವುಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಚಂಡಮಾರುತ ಸೃಷ್ಟಿಯಾಗಲು 28ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಬೇಕು. ಬಂಗಾಳಕೊಲ್ಲಿಯ ಮೇಲ್ಮೈ ತಾಪಮಾನವು ಅರಬ್ಬಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ಹೆಚ್ಚಿರುತ್ತದೆ.
  2. ಆದರೆ ಈ ಬಾರಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಅತಿ ಹೆಚ್ಚು ಚಂಡಮಾರುತಗಳು ಅಪ್ಪಳಿಸಿವೆ. ಈ ವರ್ಷದ ಪ್ರಾರಂಭವದಲ್ಲಿ ವಾಯು ಮತ್ತು ಹಿಕ್ಕ ಚಂಡಮಾರುಗಳು ಅಪ್ಪಳಿಸಿದರೆ ಈಗ ಕ್ಯಾರ್‌ ಚಂಡಮಾರುತವು ಕರ್ನಾಟಕ, ಗೋವಾ ಮಹಾರಾಷ್ಟ್ರಗಳಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಹವಾಮಾನ ತಜ್ಞರ ಪ್ರಕಾರ ಅರಬ್ಬಿ ಸಮುದ್ರದಿಂದ ಮತ್ತಷ್ಟುಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ. ಜಾಗತಿಕ ಹವಾಮಾನವು ದಿನೇ ದಿನೇ ಬದಲಾಗುತ್ತಿರುವುದರಿಂದ ಬಿರುಗಾಳಿ ಅಥವಾ ಚಂಡಮಾರುತಗಳ ವರ್ತನೆಗಳು ಬದಲಾಗುತ್ತಿವೆ.
  3. ಮುಂದಿನ ದಿನಗಳಲ್ಲಿ ಚಂಡಮಾರುಗಳು ಯಾವ ಕಡೆಗೆ , ಯಾವಾಗ ಅಪ್ಪಳಿಸುತ್ತವೆ ಎನ್ನುವುದನ್ನೂ ಊಹಿಸುವುದು ಕಷ್ಟವಾಗಬಹುದು ಎನ್ನುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಸೈಕ್ಲೋನಿಕ್‌ ಬಿರುಗಾಳಿಗಳು ಸಮುದ್ರದ ಮೇಲ್ಮೈಗಳನ್ನು ಬೆಚ್ಚಗಾಗಿಸುವುದರಿಂದ ಮತ್ತು ಗಾಳಿಯ ವೇಗ ಕಡಿಮೆಯಾಗುವುದರಿಂದ ಚಂಡಮಾರುಗಳು ಯಾವಾಗ ಅಪ್ಪಳಿಸುತ್ತವೆ, ಅವುಗಳ ಸ್ವರೂಪ ಹೇಗಿರುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟವಾಗಿದೆ.

ಕರಾವಳಿಯಲ್ಲಿ ಮಾರುತಗಳ ಆರ್ಭಟ ಹೆಚ್ಚು ಏಕೆ?

ಸಮುದ್ರ ಪ್ರದೇಶದಲ್ಲಿ ಚಂಡಮಾರುತದ ತೀವ್ರತೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಸೈಕ್ಲೋನ್‌ ಕರಾವಳಿಯನ್ನು ತಲುಪಿದಾಗ ಸಮುದ್ರಮಟ್ಟಏರತೊಡಗುತ್ತದೆ. ಹೀಗೆ ದಿಢೀರನೆ ಸಮುದ್ರಮಟ್ಟದಲ್ಲಿ ಏರಿಕೆಯಾದರೆ ನೀರು ಕಡಲಿಗೆ ಹೊಂದಿಕೊಂಡ ಪ್ರದೇಶಗಳನ್ನು ಮುಳುಗಿಸುತ್ತದೆ. ಹೀಗಾಗಿ ಸಮುದ್ರ ದಾಟಿ ಮೊದಲು ಸಿಗುವ ಕರಾವಳಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಘನಘೋರವಾಗಿರುತ್ತದೆ. ನಾಡಿನತ್ತ ಬಂದಂತೆಲ್ಲಾ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತದೆ. ಭೂಭಾಗದ ಒಳಬಂದಂತೆಲ್ಲಾ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಭೀಕರ ಮಳೆ ಒಳಪ್ರದೇಶಗಳನ್ನು ಬಾಧಿಸುವ ಸಾಧ್ಯತೆ ಇರುತ್ತದೆ.

ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?

ಉಷ್ಣವಲಯದ ಪ್ರದೇಶಗಳಲ್ಲಿನ, ಸಮುದ್ರದ ನೀರಿನ ಮೇಲೆ ಚಂಡಮಾರುತಗಳು ರೂಪುಗೊಳ್ಳುತ್ತವೆ.

ಈ ಪ್ರದೇಶಗಳು ಹೆಚ್ಚಿನ ಪ್ರಮಾಣದ ಸೌರ ಬೆಳಕನ್ನು ಹೊಂದಿವೆ, ಇದು ಭೂಮಿಯ ಮತ್ತು ಜಲಭಾಗಗಳ   ಮೇಲ್ಮೈಯನ್ನು ಬಿಸಿಮಾಡುತ್ತದೆ ಅಥವಾ ಬೆಚ್ಚಗಾಗಿಸುತ್ತದೆ. ಮೇಲ್ಮೈ ಬಿಸಿಯಾಗುತ್ತಿದ್ದಂತೆ, ಸಮುದ್ರದ ಮೇಲಿರುವ ಬೆಚ್ಚಗಿನ ಆರ್ದ್ರ ಗಾಳಿಯು ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ, ಅದರ ನಂತರ ತಂಪಾದ ಗಾಳಿಯು ಖಾಲಿ ಜಾಗಗಳನ್ನು ಅಥವಾ ನಿರ್ವಾತವನ್ನು ತುಂಬಲು ವೇಗವಾಗಿ ಧಾವಿಸುತ್ತದೆ, ನಂತರ ಅದುಕೂಡ ಬಿಸಿಯಾಗುವುದರ ಮೂಲಕ ಮೇಲಕ್ಕೆ ಏರುತ್ತದೆ ಮತ್ತು ಈ ಚಕ್ರವು ನಿರಂತರವಾಗಿ ಹೀಗೆಯೇ ಮುಂದುವರಿಯುತ್ತದೆ.

ಈ ಗಾಳಿಯ ಚಕ್ರವು ನಿರ್ಮಾಣಗೊಳ್ಳಲು ಕಾರಣ?

ಗಾಳಿ ಯಾವಾಗಲೂ ಅಧಿಕ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಗಳಿಗೆ ಬೀಸುತ್ತದೆ. ಶೀತ ಪ್ರದೇಶಗಳಲ್ಲಿ ಅಧಿಕ ಒತ್ತಡದ ಪ್ರದೇಶಗಳು ರೂಪುಗೊಳ್ಳುತ್ತವೆ, ಆದರೆ ಕಡಿಮೆ ಒತ್ತಡದ ಪರಿಸ್ಥಿತಿಗಳು ಬೆಚ್ಚಗಿನ ಅಥವಾ ಬಿಸಿ ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ. ಧ್ರುವ ಪ್ರದೇಶಗಳಲ್ಲಿನ ಸೌರ ಬೆಳಕಿನ ಪ್ರಮಾಣವು ಉಷ್ಣವಲಯದ ಪ್ರದೇಶಗಳಿಗಿಂತ ತೀರಾ ಕಡಿಮೆ, ಆದ್ದರಿಂದ ಇವು ಸಾಮಾನ್ಯವಾಗಿ ಅಧಿಕ ಒತ್ತಡದ ಪ್ರದೇಶಗಳಾಗಿವೆ. ಆದ್ದರಿಂದಲೇ ಗಾಳಿಯು ಧ್ರುವ ಪ್ರದೇಶಗಳಿಂದ ಉಷ್ಣವಲಯದ ಪ್ರದೇಶಗಳಿಗೆ ಹೆಚ್ಚಾಗಿ ಬೀಸುತ್ತದೆ.

  1. ಇದರ ನಂತರ, ಭೂಮಿಯ ಚಲನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದು ಪಶ್ಚಿಮದಿಂದ ಪೂರ್ವಕ್ಕೆ. ಭೂಮಿಯು ತನ್ನದೇ ಆದ ಅಕ್ಷದಲ್ಲಿ ಪರಿಭ್ರಮಿಸುತ್ತಿರುವುದರಿಂದ, ಎರಡೂ ಧ್ರುವಗಳಿಂದ ಬೀಸುವ ಗಾಳಿಯು ಉಷ್ಣವಲಯದಲ್ಲಿ ವಿಚಲಣೆ ಗೊಳ್ಳುತ್ತದೆ, ಏಕೆಂದರೆ ಭೂಮಿಯು ಗೋಳಾಕಾರ ವಾಗಿರುವುದರಿಂದ, ಧ್ರುವಗಳಿಗಿಂತ ಉಷ್ಣವಲಯದಲ್ಲಿ ಭೂಮಿಯ ತಿರುಗುವಿಕೆಯ ವೇಗ ಹೆಚ್ಚಿರುತ್ತದೆ. ಆರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಬಲಕ್ಕೆ ತಿರುಗುತ್ತದೆ ಮತ್ತು ಅಂಟಾರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಎಡಕ್ಕೆ ತಿರುಗುತ್ತದೆ.
  2. ಹೀಗಾಗಿ, ಈಗಾಗಲೇ ನಿರ್ದಿಷ್ಟ ದಿಕ್ಕುಗಳಲ್ಲಿ ಬೀಸುತ್ತಿರುವ ಗಾಳಿಯು, ಬೆಚ್ಚಗಿನ ಸ್ಥಳವನ್ನು ತಲುಪಿದ ನಂತರ,ಖಾಲಿ ಜಾಗವನ್ನು ತುಂಬಲು ತಂಪಾದ ಗಾಳಿಯು ಕೇಂದ್ರದ ಕಡೆಗೆ ಆಕರ್ಷಿತವಾಗಲು ಪ್ರಾರಂಭಿಸುತ್ತದೆ. ಕೇಂದ್ರದ ಕಡೆಗೆ ಚಲಿಸುವಾಗ, ತಂಪಾದ ಗಾಳಿಯು ಗಾಳಿಯ ಚಲನೆಯ ಪ್ರಸರಣದ ಪರಿಣಾಮವಾಗಿ ತಿರುಗುತ್ತಲೇ ಇರುತ್ತದೆ ಮತ್ತು ಇದು ಚಂಡಮಾರುತದ ತಾಣವನ್ನು ಮುಟ್ಟುವವರೆಗೂ ಅಂದರೆ ಹೀಗೆ ರೂಪುಗೊಳ್ಳುವ ಚಂಡಮಾರುತವು ಭೂಮಿಗೆ ಅಪ್ಪಳಿಸುವ ವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.

ಚಂಡಮಾರುತವು ಭೂಮಿಗೆ ಅಪ್ಪಳಿಸಿದಾಗ ಆಗುವ ಪರಿಣಾಮಗಳು?

ಭೂಮಿಯನ್ನು ತಲುಪಿದ ನಂತರ ಅಥವಾ ಭೂಮಿಗೆ ಅಪ್ಪಳಿಸಿದ ನಂತರ ಚಂಡಮಾರುತವು ವಿಭಜನೆಗೊಂಡು ಕೊನೆಗೊಳ್ಳುತ್ತದೆ, ಏಕೆಂದರೆ ಬಿಸಿಯಾದನೀರು ಮೇಲಕ್ಕೇರುವ ಮೂಲಕ ತಂಪಾದ ನೀರಿಗೆ ಸ್ಥಳಾವಕಾಶವನ್ನು ಸೃಷ್ಟಿಸುತ್ತದೆ, ಆದರೆ  ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಂಪು ನೀರು ಲಭ್ಯವಿರುವುದಿಲ್ಲ, ಇದರ ಜೊತೆಗೆ ಎತ್ತರದ ಆರ್ದ್ರ(ತೇವಾಂಶಭರಿತ) ಗಾಳಿಯು ಮೋಡಗಳು ರೂಪುಗೊಳ್ಳಲು ಕಾರಣೀಭೂತವಾಗುತ್ತದೆ, ಇದು ಚಂಡಮಾರುತಗಳ ಸಮಯದಲ್ಲಿ ಬಲವಾದ ಗಾಳಿಯೊಂದಿಗೆ ತೀವ್ರವಾದ ಮಳೆಯಾಗಲು ಕಾರಣವಾಗುತ್ತದೆ.

ಚಂಡಮಾರುತಗಳು ಹೆಚ್ಚಲು ಕಾರಣಗಳೇನು?

  1. ಮುಂಗಾರು ಋತುವಿಗೆ ಮೊದಲು ಮತ್ತು ಮುಂಗಾರು ಋತುವಿನ ನಂತರ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಗರದ ಮೇಲ್ಮೈಯ ತಾಪದಲ್ಲಿ ಏರಿಕೆ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹಿಂದೂ ಮಹಾಸಾಗರದ ಮೇಲ್ಮೈಯ ಸರಾಸರಿ ತಾಪವು 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇತರ ಸಾಗರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರವು ಹೆಚ್ಚು ತಂಪು. ಹಾಗಿದ್ದರೂ ಬೇಸಿಗೆಯ ಅವಧಿಯಲ್ಲಿ ಸಾಗರದ ಮೇಲ್ಮೈ ತಾಪವು 1.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿತ್ತು.
  2. ಹಸಿರುಮನೆ ಅನಿಲಗಳು ಹೊರಸೂಸುವ ತಾಪದ ಶೇ 90ರಷ್ಟನ್ನು ಸಮುದ್ರವು ಹೀರಿಕೊಳ್ಳುತ್ತದೆ. ಮಾರುತಗಳಿಗೆ ಶಕ್ತಿ ನೀಡುವುದೇ ನೀರಿನ ತಾಪ. ಇತರ ಸಮುದ್ರಗಳಿಗೆ ಹೋಲಿಸಿದರೆ ಅರಬ್ಬಿಸಮುದ್ರದ ತಾಪವು ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಗುರುತಿಸಲಾಗಿದೆ.
  3. ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ಚಂಡಮಾರುತದ ವೇಗ ಹೆಚ್ಚಳವಾಗುತ್ತದೆ. ಇದು ಮಾರುತವು ಕರಾವಳಿಯನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರುವ ಭೂ ಪ್ರದೇಶದ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಚಂಡಮಾರುತದ ಅವಧಿಯಲ್ಲಿ ಬೀಳುವ ಮಳೆಯ ಪ್ರಮಾಣ ಹೆಚ್ಚಳವಾಗಿ, ಜಲಾವೃತಗೊಳ್ಳುವ ಪ್ರದೇಶವೂ ಹೆಚ್ಚುತ್ತದೆ. ಯೋಜಿತವಲ್ಲದ ನಗರಾಭಿವೃದ್ಧಿ, ಕಾಂಡ್ಲಾವನಗಳ ನಾಶ ಚಂಡಮಾರುತಗಳ ಪರಿಣಾಮವನ್ನು ತೀವ್ರವಾಗಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ.
  4. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡಲ್ಲೂ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆ. 1891ರಿಂದ 2,000ದವರೆಗೆ ಬಂಗಾಳ ಕೊಲ್ಲಿಯಲ್ಲಿ 308 ಚಂಡಮಾರುತಗಳು ಸೃಷ್ಟಿ ಯಾಗಿವೆ. ಅವುಗಳ ಪೈಕಿ 103 ತೀವ್ರವಾಗಿದ್ದವು. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ 48 ಬಿರುಗಾಳಿಗಳಲ್ಲಿ 24 ತೀವ್ರ ಪರಿಣಾಮ ಉಂಟು ಮಾಡಿದ್ದವು.

ನಾಮಕರಣ ಪ್ರಕ್ರಿಯೆ ಹೇಗೆ?

  1. ಚಂಡಮಾರುತಗಳು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಹಾಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಹಾಗಾದಾಗ ಗೊಂದಲ ಸಹಜ. ಈ ಗೊಂದಲ ನಿವಾರಣೆಗಾಗಿ ಚಂಡಮಾರುತಗಳಿಗೆ ಹೆಸರು ಇರಿಸುವ ಪರಿಪಾಟ ಶುರುವಾಯಿತು. ಪ್ರಾದೇಶಿಕವಾಗಿ ಒಪ್ಪಿತವಾದ ನಿಯಮಾನುಸಾರ ಹೆಸರು ಇರಿಸಲಾಗುತ್ತದೆ.
  2. ಚಂಡಮಾರುತಗಳ ಮೇಲೆ ನಿಗಾ ಇರಿಸುವ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMC) ಮತ್ತು ಐದು ಪ್ರಾದೇಶಿಕ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWC) ಇವೆ. ಚಂಡಮಾರುತದ ಮುನ್ನೆಚ್ಚರಿಕೆ ನೀಡುವುದು ಮತ್ತು ಹೆಸರು ಇರಿಸುವುದು ಈ ಕೇಂದ್ರಗಳ ಹೊಣೆಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದ 13 ದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡುವುದು ದೆಹಲಿಯಲ್ಲಿರುವ ಆರ್‌ಎಸ್‌ಎಂಸಿಯ ಜವಾಬ್ದಾರಿ. ಈ 13 ದೇಶಗಳೆಂದರೆ, ಬಾಂಗ್ಲಾದೇಶ, ಭಾರತ, ಇರಾನ್‌, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್‌, ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಯೆಮನ್‌.
  3. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಳಿಗೆ ಹೆಸರು ಇರಿಸುವುದು ಕೂಡ ದೆಹಲಿಯ ಆರ್‌ಎಸ್‌ಎಂಸಿಯ ಹೊಣೆ. ಈ ಪ್ರದೇಶದ ದೇಶಗಳು ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿ ಇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಸರದಿಯಂತೆ ಇರಿಸಬೇಕಾಗುತ್ತದೆ. ಚಂಡಮಾರುತ ಸೃಷ್ಟಿಯಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಹೆಸರು ನಿರ್ಧಾರ ಆಗಿರುತ್ತದೆ.
  4. 2004ರಲ್ಲಿ ರೂಪಿಸಿದ್ದ 64 ಹೆಸರುಗಳ ಪಟ್ಟಿಯಲ್ಲಿದ್ದ ಕೊನೆಯ ಹೆಸರನ್ನು ಕಳೆದ ವರ್ಷ ಬೀಸಿದ ಆಂಫನ್‌ ಚಂಡಮಾರುತಕ್ಕೆ ಇರಿಸಲಾಗಿದೆ.
  5. ಭಾರತೀಯ ಹವಾಮಾನ ಇಲಾಖೆಯು 2020ರಲ್ಲಿ ಹೊಸ ಪಟ್ಟಿ ರೂಪಿಸಿದೆ. 13 ದೇಶಗಳು ಸೂಚಿಸಿದ ತಲಾ 13 ಹೆಸರುಗಳು ಹೊಸ ಪಟ್ಟಿಯಲ್ಲಿ ಸೇರಿವೆ. ಒಟ್ಟು 169 ಹೆಸರುಗಳಿವೆ. ಈಗ ಹೊಸ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತಿದೆ. ಈ ವಾರ ಅಪ್ಪಳಿಸಲಿರುವ ಚಂಡಮಾರುತ ‘ಯಸ್‌’ ಹೆಸರನ್ನು ಒಮಾನ್‌ ಸೂಚಿಸಿದೆ. ಮುಂದಿನ ಚಂಡಮಾರುತದ ಹೆಸರು ‘ಗುಲಾಬ್‌’, ಇದನ್ನು ‍ಪಾಕಿಸ್ತಾನ ಸೂಚಿಸಿದೆ.

ಇತ್ತೀಚಿನ ಕೆಲವು ಚಂಡಮಾರುತಗಳು:

  1. ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ ಆಂಪನ್ ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು. ಬಂಗಾಳದಲ್ಲಿ 72 ಜನರು, ಬಾಂಗ್ಲಾದೇಶದಲ್ಲಿ 12 ಜನರು ಇದಕ್ಕೆ ಬಲಿಯಾಗಿದ್ದರು. ಬಂಗಾಳದಲ್ಲಿ 1.40 ಕೋಟಿ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದರು. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಬೀಸಿದ ಇದು, ಒಟ್ಟು ₹95,000 ಕೋಟಿ ನಷ್ಟ ಉಂಟು ಮಾಡಿತ್ತು ಎಂದು ಅಂದಾಜಿಸಲಾಗಿದೆ.
  2. ಕಳೆದ ವರ್ಷ ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. ಆಗ ಮುಂಬೈನಲ್ಲಿ ಕೋವಿಡ್‌ನ ಮೊದಲ ಅಲೆ ಭಾರಿ ಜೋರಾಗಿತ್ತು. ಆದರೆ ಚಂಡಮಾರುತ ಒಮಾನ್ ಕಡೆಗೆ ದಿಕ್ಕು ಬದಲಿಸಿದ್ದರಿಂದ, ಭಾರಿ ಪ್ರಮಾಣದ ಹಾನಿ ತಪ್ಪಿತು.
  3. ‘ಫನಿ’ ಚಂಡಮಾರುತವು 1998ರ ಒಡಿಶಾ ಚಂಡಮಾರುತದ ನಂತರ ಒಡಿಶಾಗೆ ಅಪ್ಪಳಿಸಿದ ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. 2019ರಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರಿ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಉಂಟುಮಾಡಿತು. ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾಗೂ ಅಪ್ಪಳಿಸಿತ್ತು.
  4. ‘ನಿವಾರ್’ ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಉಂಟಾಗದಿದ್ದರೂ, ರೈತಾಪಿ ವರ್ಗ ಕಷ್ಟ ಅನುಭವಿಸಿತು.
  5. 2019ರಲ್ಲಿ ‘ಬುಲ್‌ಬುಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತವಾಗಿತ್ತು. ಇದು ಭಾರಿ ಮಳೆ, ಪ್ರವಾಹ ಇತ್ಯಾದಿಗಳಿಗೆ ಕಾರಣವಾಯಿತು. ಇದರಿಂದಾಗಿ ಜೀವ ಮತ್ತು ಆಸ್ತಿ ನಾಶವಾಯಿತು. ಭಾರತದ ಹೊರಗೆ ಅದು ಬಾಂಗ್ಲಾದೇಶಕ್ಕೂ ತೊಂದರೆ ಕೊಟ್ಟಿತ್ತು.
  6. ‘ವಾಯು’ ಚಂಡಮಾರುತವು ಅರಬ್ಬೀ ಸಮುದ್ರದ ಮೂಲಕ ಅಪ್ಪಳಿಸಿ ಗುಜರಾತ್ ರಾಜ್ಯದಲ್ಲಿ ಜೀವ ಮತ್ತು ಆಸ್ತಿಗೆ ಒಂದಿಷ್ಟು ಹಾನಿಯನ್ನುಂಟುಮಾಡಿತು. ಇದು 1998ರ ಗುಜರಾತ್ ಚಂಡಮಾರುತದ ನಂತರ ರಾಜ್ಯಕ್ಕೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿತ್ತು. ಇದು ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಒಮಾನ್‌ಗಳ ಮೇಲೂ ಪರಿಣಾಮ ಬೀರಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

CBI ಮತ್ತು ED ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸಲು ಮಸೂದೆಗಳು:


(Bills to Extend tenure of ED and CBI Chiefs)

ಸಂದರ್ಭ:

ಪ್ರತಿಪಕ್ಷಗಳ ತೀವ್ರ ಆಕ್ಷೇಪಗಳ ನಡುವೆಯೇ, ಕೇಂದ್ರೀಯ ತನಿಖಾ ದಳ’ (CBI) ಮತ್ತು ‘ಜಾರಿ ನಿರ್ದೇಶನಾಲಯ’ (ED) ನಿರ್ದೇಶಕರ ಅಧಿಕಾರಾವಧಿಯನ್ನು ಪ್ರಸ್ತುತವಿರುವ 2 ವರ್ಷಗಳ ನಿಗದಿತ ಅವಧಿಯಿಂದ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

  1. ಈ ಮಸೂದೆಗಳು ಕಳೆದ ತಿಂಗಳು ಹೊರಡಿಸಲಾದ ಸುಗ್ರೀವಾಜ್ಞೆಗಳನ್ನು ಬದಲಿಸುತ್ತದೆ.

ಸುಗ್ರೀವಾಜ್ಞೆ ಕುರಿತು:

ಇತ್ತೀಚೆಗೆ, ಕೇಂದ್ರ ಸರ್ಕಾರವು ಎರಡು ಸುಗ್ರೀವಾಜ್ಞೆಗಳನ್ನು ಪ್ರಕಟಿಸಿದೆ, ಇದರಲ್ಲಿ ಕೇಂದ್ರೀಯ ತನಿಖಾ ದಳ’ (CBI) ಮತ್ತು ‘ಜಾರಿ ನಿರ್ದೇಶನಾಲಯ’ (Enforcement Directorate – ED) ಗಳ ನಿರ್ದೇಶಕರ ಸೇವಾ ಅವಧಿಯನ್ನು ಪ್ರಸ್ತುತ ಇರುವ ನಿಗದಿತ ಎರಡು ವರ್ಷಗಳಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.

  1. ಉನ್ನತ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿಯಲ್ಲಿ, ಒಂದು ಬಾರಿಗೆ ಒಂದು ವರ್ಷಕ್ಕೆ ಮಾತ್ರ ವಿಸ್ತರಣೆಯನ್ನು ನೀಡಬಹುದು. ಅಂದರೆ, ಎರಡು ವರ್ಷಗಳ ನಿಗದಿತ ಅವಧಿಯ ನಂತರ, ಅವರು ವಾರ್ಷಿಕವಾಗಿ ಮೂರು ಬಾರಿ ಸೇವಾ ಅವಧಿಯಲ್ಲಿ ವಿಸ್ತರಣೆಯನ್ನು ಪಡೆಯಬಹುದು. (The extension can be given only one year at a time. That is, after a fixed two-year tenure, they may get three annual extensions).

ಪರಿಷ್ಕೃತ/ತಿದ್ದುಪಡಿ ಮಾಡಿದ ಕಾನೂನುಗಳು:

  1. ‘ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ’, 1946 ಕ್ಕೆ ತಿದ್ದುಪಡಿ ತರುವ ಮೂಲಕ, ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯಲ್ಲಿ ಬದಲಾವಣೆ ತರಲಾಗಿದೆ.
  2. ಜಾರಿ ನಿರ್ದೇಶನಾಲಯ (ಇಡಿ) ನಿರ್ದೇಶಕರ ಅಧಿಕಾರಾವಧಿಯಲ್ಲಿ ಬದಲಾವಣೆಗಾಗಿ 2003ರ ‘ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಆಕ್ಟ್’ಗೆ ತಿದ್ದುಪಡಿ ಮಾಡಲಾಗಿದೆ.

‘ಮೂಲಭೂತ ನಿಯಮಗಳು 1922’ ಗೆ ತಿದ್ದುಪಡಿ,:

ಅಧಿಕಾರಾವಧಿ ಬದಲಾವಣೆಯ ಪಟ್ಟಿಯಲ್ಲಿ ಇನ್ನೆರಡು ಹುದ್ದೆಗಳನ್ನು ಸೇರಿಸಲು 1922 ರ ‘ಮೂಲಭೂತ ನಿಯಮಗಳಿಗೆ’ (Fundamental Rules, 1922) ತಿದ್ದುಪಡಿ ಮಾಡಲು ಸಿಬ್ಬಂದಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ,ಆ ಮೂಲಕ ಅವರ ಸೇವೆಗಳನ್ನು “ಸಾರ್ವಜನಿಕ ಹಿತಾಸಕ್ತಿ” ಯ ದೃಷ್ಟಿಯಿಂದ ಎರಡು ವರ್ಷಗಳ ನಿಗದಿತ ಅಧಿಕಾರವಧಿಯನ್ನು ಮೀರಿ ಇನ್ನೂ ಎರಡು ವರ್ಷಗಳ ಹೆಚ್ಚುವರಿ ಅವಧಿಗೆ ವಿಸ್ತರಿಸಬಹುದಾಗಿದೆ.

  1. ಹಿಂದಿನ ಪಟ್ಟಿಯಲ್ಲಿ ರಕ್ಷಣಾ ಕಾರ್ಯದರ್ಶಿ, ವಿದೇಶಾಂಗ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಮತ್ತು ‘ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ’ (RAW) ಕಾರ್ಯದರ್ಶಿಗಳು ಸೇರಿದ್ದಾರೆ.

ಈ ಸುಗ್ರೀವಾಜ್ಞೆಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ:

ಕೇಂದ್ರ ಸರ್ಕಾರ ಹೊರಡಿಸಿರುವ ಎರಡು ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಸುಗ್ರೀವಾಜ್ಞೆಗಳ ಮೂಲಕ ಕೇಂದ್ರ ಸರ್ಕಾರವು ‘ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ (CBI) ಮತ್ತು ‘ಜಾರಿ ನಿರ್ದೇಶನಾಲಯ’ (Enforcement Directorate – ED) ನಿರ್ದೇಶಕರ ಅಧಿಕಾರಾವಧಿಯನ್ನು ವಿವಿಧ ಹಂತಗಳಲ್ಲಿ (ತುಣುಕು – ತುಣುಕು ರೀತಿಯಲ್ಲಿ) ಐದು ವರ್ಷಗಳವರೆಗೆ ವಿಸ್ತರಿಸಲು ಅಧಿಕಾರವನ್ನು ನೀಡಿದೆ.

ಸಮಸ್ಯೆಗಳು:

  1. ಈ ಸುಗ್ರೀವಾಜ್ಞೆಗಳು ಎರಡೂ ಉನ್ನತ ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ತಮ್ಮ ಅಧಿಕಾರಾವಧಿಯ ಬಗ್ಗೆ ಅಸುರಕ್ಷಿತವಾಗಿಸುತ್ತದೆ ಮತ್ತು ಅವರ ವೃತ್ತಿಪರ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸುತ್ತಾರೆ.
  2. ಇದಲ್ಲದೆ, ಈ ಸುಗ್ರೀವಾಜ್ಞೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ’ಯ ಅಸ್ಪಷ್ಟ ಉಲ್ಲೇಖವನ್ನು ಹೊರತುಪಡಿಸಿ ಯಾವುದೇ ಮಾನದಂಡಗಳನ್ನು ಒದಗಿಸಲಾಗಿಲ್ಲ. ವಾಸ್ತವವಾಗಿ ಇದು ಸರ್ಕಾರದ ವ್ಯಕ್ತಿನಿಷ್ಠ ತೃಪ್ತಿಯನ್ನು ಆಧರಿಸಿದೆ. ಇದರ ನೇರ ಮತ್ತು ಸ್ಪಷ್ಟ ಪರಿಣಾಮವು ತನಿಖಾ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಪಡಿಸುವುದಾಗಿದೆ.
  3. ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ಕೂಡ ತೀವ್ರವಾಗಿ ಟೀಕಿಸಿವೆ. ಮುಂಬರುವ ಸಂಸತ್ತಿನ ಅಧಿವೇಶನವು ನವೆಂಬರ್ 29 ರಿಂದ ಪ್ರಾರಂಭವಾಗುತ್ತಿದ್ದರೂ ಈ ಕಾನೂನನ್ನು ಜಾರಿಗೆ ತರಲು ಸರ್ಕಾರವು ‘ಅಧ್ಯಾದೇಶ’ದ ಅಥವಾ ಸುಗ್ರೀವಾಜ್ಞೆಯ ಮಾರ್ಗವನ್ನು ಆರಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಯಾವ ಆಧಾರದ ಮೇಲೆ ಈ ಸುಗ್ರೀವಾಜ್ಞೆ ಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ?

ಸುಮಾರು ಒಂದು ವರ್ಷದ ಹಿಂದೆ, ಜಾರಿ ನಿರ್ದೇಶನಾಲಯದ (ED) ನಿರ್ದೇಶಕರಿಗೆ ಅವರು ತಮ್ಮ ಎರಡು ವರ್ಷಗಳ ನಿಶ್ಚಿತ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಹಿಂದಿನ ಪರಿಣಾಮದೊಂದಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಯಿತು. ಸರ್ಕಾರದ ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು ಮತ್ತು ಇದರಲ್ಲಿ ನ್ಯಾಯಾಲಯವು ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು. ಆದರೆ, ಇಂತಹ ಕಠಿಣ ಕ್ರಮಗಳನ್ನು ತೀರಾ ಅಪರೂಪಕ್ಕೆ ಮಾತ್ರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

  1. ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಮತ್ತು ‘ವಿನೀತ್ ನಾರಾಯಣ್ VS ಯೂನಿಯನ್ ಆಫ್ ಇಂಡಿಯಾ’ (1997) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸುವ ಮೂಲಕ ಎರಡೂ ಸುಗ್ರೀವಾಜ್ಞೆಗಳನ್ನು ಅನಿಯಂತ್ರಿತ ಮತ್ತು ಅಸಂವಿಧಾನಿಕ ಎಂದು ಆರೋಪಿಸಿದ್ದಾರೆ. 1997 ರ ತೀರ್ಪಿನಲ್ಲಿ, ‘ಕೇಂದ್ರೀಯ ತನಿಖಾ ದಳ’ (ಸಿಬಿಐ) ಮತ್ತು ‘ಜಾರಿ ನಿರ್ದೇಶನಾಲಯ’ (ಇಡಿ) ಮುಖ್ಯಸ್ಥರು ಕನಿಷ್ಠ ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

 

ವಿಷಯಗಳು:ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಪೌರತ್ವ (ತಿದ್ದುಪಡಿ) ಕಾಯ್ದೆ, 2019:


(Citizenship (Amendment) Act 2019)

ಸಂದರ್ಭ:

ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship (Amendment) Act, 2019) ಅಂದರೆ CAA ಅನ್ನು ಸಂಸತ್ತು ಅಂಗೀಕರಿಸಿದ ಎರಡು ವರ್ಷಗಳ ನಂತರವೂ, ಕಾಯಿದೆಯನ್ನು ನಿಯಂತ್ರಿಸುವ ನಿಯಮಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಇನ್ನೂ ತಿಳಿಸಬೇಕಾಗಿದೆ ಅಥವಾ ಅಧಿಸೂಚಿ ಸಬೇಕಾಗಿದೆ. CAA ಕಾಯಿದೆಯನ್ನು ನಿಯಂತ್ರಿಸುವ ನಿಯಮಗಳನ್ನು ತಿಳಿಸದೆ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ.

ಹಿನ್ನೆಲೆ:

ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA) ಅನ್ನು ಡಿಸೆಂಬರ್ 12, 2019 ರಂದು ಅಧಿಸೂಚಿಸಲಾಯಿತು ಮತ್ತು 2020 ರ ಜನವರಿ 10 ರಿಂದ ಜಾರಿಗೆ ಬಂದಿತು.

(ಸೂಚನೆ: ಯಾವುದೇ ಹೊಸ ಅಥವಾ ತಿದ್ದುಪಡಿ ಮಾಡಿದ ಕಾನೂನನ್ನು ಅನುಷ್ಠಾನಗೊಳಿಸಲು, ‘ನಿಯಮಗಳನ್ನು’ ಮಾಡುವುದು ಕಡ್ಡಾಯವಾಗಿದೆ, ಮತ್ತು ಇವುಗಳನ್ನು ಸಾಮಾನ್ಯವಾಗಿ ಕಾನೂನು ಜಾರಿಗೆ ಬಂದ ಆರು ತಿಂಗಳೊಳಗೆ ರೂಪಿಸಲಾಗುತ್ತದೆ.)

  1. 2019 ರ ಪೌರತ್ವ (ತಿದ್ದುಪಡಿ) ಕಾಯ್ದೆಯು ಪೌರತ್ವ ಕಾಯ್ದೆ, 1955 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.
  2. ಪೌರತ್ವ ಕಾಯ್ದೆ, 1955 ಪೌರತ್ವವನ್ನು ಪಡೆಯಲು ಇರುವ ವಿವಿಧ ವಿಧಾನಗಳನ್ನು ಸೂಚಿಸುತ್ತದೆ.
  3. ಇದರ ಅಡಿಯಲ್ಲಿ ಭಾರತದಲ್ಲಿ ಜನನ, ಆನುವಂಶಿಕತೆ, ನೋಂದಣಿ, ನೈಸರ್ಗಿಕಿಕರಣ ಮತ್ತು ಭೂಪ್ರದೇಶವೊಂದನ್ನು ಭಾರತಕ್ಕೆ ಸೇರ್ಪಡೆ ಗೊಳಿಸುವುದರ ಆಧಾರದ ಮೇಲೆ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು:

  1. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾದ – ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು CAA ಹೊಂದಿದೆ.
  2. ಈ ಸಮುದಾಯಗಳಲ್ಲಿ 2014 ರ ಡಿಸೆಂಬರ್ 31 ರವರೆಗೆ ಆಯಾ ದೇಶಗಳಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳ ಅನುಭವಿಸಿದ ವ್ಯಕ್ತಿಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ ಆದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುವುದು.
  3. ಕಾಯಿದೆಯ ಮತ್ತೊಂದು ನಿಬಂಧನೆಯ ಪ್ರಕಾರ, ಕೇಂದ್ರ ಸರ್ಕಾರವು ಸಾಗರೋತ್ತರ ನಾಗರಿಕರ (OCI) ನೋಂದಣಿಯನ್ನು ಕೆಲವು ಆಧಾರಸಹಿತ ಕಾರಣಗಳಿಂದ ರದ್ದುಗೊಳಿಸಬಹುದು.

ವಿನಾಯಿತಿಗಳು:

  1. ತ್ರಿಪುರ, ಮಿಜೋರಾಂ, ಅಸ್ಸಾಂ ಮತ್ತು ಮೇಘಾಲಯದ ಬುಡಕಟ್ಟು ಪ್ರದೇಶಗಳು ಸಂವಿಧಾನದ ಆರನೇ ಅನುಸೂಚಿಯಲ್ಲಿ ಸೇರ್ಪಡೆ ಗೊಂಡಿರುವ ಕಾರಣದಿಂದಾಗಿ ಈ ಕಾಯ್ದೆ ಅವುಗಳಿಗೆ ಅನ್ವಯಿಸುವುದಿಲ್ಲ.
  2. ಇದಲ್ಲದೆ, ಬಂಗಾಳ ಪೂರ್ವ ಗಡಿನಾಡು ನಿಯಮಗಳು, 1873 ರ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ‘ಇನ್ನರ್ ಮಿತಿ’ (inner limit) ಅಡಿಯಲ್ಲಿರುವ ಪ್ರದೇಶಗಳು ಸಹ ಈ ಕಾಯಿದೆಯ ವ್ಯಾಪ್ತಿಗೆ ಹೊರತಾಗಿವೆ.

ಈ ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳು:

  1. ಈ ಕಾನೂನು ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುತ್ತದೆ. ಇದರ ಅಡಿಯಲ್ಲಿ ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.
  2. ಶಾಸನವನ್ನು ಸ್ಥಳೀಯ ಸಮುದಾಯಗಳಿಗೆ ಜನಸಂಖ್ಯಾ ಬೆದರಿಕೆ ಎಂದು ಪರಿಗಣಿಸಲಾಗಿದೆ.
  3. ಇದರಲ್ಲಿ, ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ಪೌರತ್ವ ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿದೆ.ಆದರೆ, ಇದು ಸಮಾನತೆಯ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆ.
  4. ಇದು,ಒಂದು ಪ್ರದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಪೌರತ್ವವನ್ನು ಸ್ವಾಭಾವಿಕಗೊಳಿಸಲು ಪ್ರಯತ್ನಿಸುತ್ತದೆ.
  5. ಇದರ ಅಡಿಯಲ್ಲಿ, ಯಾವುದೇ ಕಾನೂನಿನ ಉಲ್ಲಂಘನೆಗಾಗಿ ‘OCI’ ನೋಂದಣಿಯನ್ನು ರದ್ದುಗೊಳಿಸಲು ಅನುಮತಿ ನೀಡಲಾಗಿದೆ. ಇದು ಸಣ್ಣ ಅಪರಾಧಗಳು ಸೇರಿದಂತೆ ವ್ಯಾಪಕವಾದ ಉಲ್ಲಂಘನೆಗಳನ್ನು ಒಳಗೊಂಡಿರುವ ವಿಶಾಲವಾದ ನೆಲೆಯಾಗಿದೆ.

CAA ಕಾಯಿದೆಗೆ ವಿರೋಧ:

  1. ಪೌರತ್ವ (ತಿದ್ದುಪಡಿ) ಕಾಯ್ದೆಯ (CAA) ಸಾಂವಿಧಾನಿಕ ಮತ್ತು ಕಾನೂನು ಸಿಂಧುತ್ವವನ್ನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆರ್ಟಿಕಲ್ 131 ರ ಅಡಿಯಲ್ಲಿ ರಾಜಸ್ಥಾನ ಮತ್ತು ಕೇರಳ ಸರ್ಕಾರಗಳು ಅರ್ಜಿಗಳನ್ನು ಸಲ್ಲಿಸಿವೆ. (ಸರ್ವೋಚ್ಚ ನ್ಯಾಯಾಲಯವು, ಯಾವುದೇ ಇತರ ನ್ಯಾಯಾಲಯಗಳನ್ನು ಹೊರತುಪಡಿಸಿ, ಭಾರತ ಸರ್ಕಾರ ಮತ್ತು ಒಂದು ರಾಜ್ಯ ಅಥವಾ ಹೆಚ್ಚಿನ ರಾಜ್ಯಗಳ ನಡುವಿನ ಯಾವುದೇ ವಿವಾದದಲ್ಲಿ ಮೂಲ ನ್ಯಾಯವ್ಯಾಪ್ತಿಯನ್ನು ಅಥವಾ ಮೂಲ ಅಧಿಕಾರವಧಿವ್ಯಾಪ್ತಿಯನ್ನು ಹೊಂದಿದೆ).
  2. ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪಂಜಾಬ್‌ನ ವಿಧಾನಸಭೆಗಳಿಂದ ಕಾಯ್ದೆಯ ವಿರುದ್ಧ ಅಂಗೀಕರಿಸಲಾದ ನಿರ್ಣಯಗಳನ್ನು ಕೇಂದ್ರ ಸರ್ಕಾರವು ಸ್ವೀಕರಿಸಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಹಕ್ಕಿ ಜ್ವರ:


(Bird Flu)

ಸಂದರ್ಭ:

ಇತ್ತೀಚೆಗೆ, ಕೇರಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ’ (Bird Flu) ಹೊಸ ಪ್ರಕರಣಗಳು ದೃಢಪಟ್ಟಿವೆ. ಪೀಡಿತ ಪ್ರದೇಶಗಳಲ್ಲಿ ಪಕ್ಷಿಗಳನ್ನು ಕೊಲ್ಲಲು ಜವಾಬ್ದಾರಿಯುತ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗಿದೆ.

  1. ಪರೀಕ್ಷೆಗೆ ತೆಗೆದುಕೊಂಡ ಮಾದರಿಗಳಲ್ಲಿ H5N1 ಇನ್ಫ್ಲುಯೆಂಜಾ ವೈರಸ್ ಪತ್ತೆಯಾಗಿದೆ.

ಪಕ್ಷಿ/ಹಕ್ಕಿ ಜ್ವರ ಎಂದರೇನು?

  1. ಇದನ್ನು, ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯುತ್ತಾರೆ.
  2. ಇದು ಏವಿಯನ್ ಇನ್ಫ್ಲುಯೆನ್ಸ ಟೈಪ್ ಎ ವೈರಸ್‌ (avian influenza Type A)ನಿಂದ ಉಂಟಾಗುವ ರೋಗವಾಗಿದ್ದು, ವಿಶ್ವಾದ್ಯಂತ ಕಾಡು ಪಕ್ಷಿಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.
  3. ಈ ರೋಗಗಳು ಸಾಮಾನ್ಯವಾಗಿ ಪ್ರಪಂಚದಾದ್ಯಂತದ ಕಾಡು ಜಲ ಪಕ್ಷಿಗಳಲ್ಲಿ ಕಂಡುಬರುತ್ತವೆ ಮತ್ತು ದೇಶೀಯ ಕೋಳಿ ಪ್ರಭೇದಗಳು ಮತ್ತು ಇತರ ಪಕ್ಷಿ ಮತ್ತು ಪ್ರಾಣಿ ಪ್ರಭೇದಗಳಿಗೆ ಸೋಂಕು ಉಂಟುಮಾಡುತ್ತವೆ.
  4. ಈ ವೈರಸ್ ದೇಶೀಯ ಕೋಳಿಗಳಿಗೆ ಸೋಂಕು ತಗುಲಿಸುತ್ತದೆ ಮತ್ತು ಥೈಲ್ಯಾಂಡ್ ಪ್ರಾಣಿಸಂಗ್ರಹಾಲಯಗಳಲ್ಲಿ ಹಂದಿಗಳು, ಬೆಕ್ಕುಗಳು ಮತ್ತು ಹುಲಿಗಳಲ್ಲಿ ಎಚ್ 5 ಎನ್ 1 ಸೋಂಕಿನ ಪ್ರಕರಣಗಳು ಕಂಡುಬಂದಿರುವುದು ವರದಿಯಾಗಿದೆ.
  5. ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾದ ಇನ್ಫ್ಲುಯೆನ್ಸದಂತಹ ಅನಾರೋಗ್ಯದವರೆಗೆ ಇವೆ.

current affairs

 

ವರ್ಗೀಕರಣ:

ಇನ್ಫ್ಲುಯೆನ್ಸ ಎ ವೈರಸ್‌ (Avian influenza Type A virus) ಗಳನ್ನು Hemagglutinin (HA) and Neuraminidase (NA) ಎಂಬ ಎರಡು ಮೇಲ್ಮೈ ಪ್ರೋಟೀನ್‌ಗಳ ಆಧಾರದ ಮೇಲೆ ಉಪ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ.

ಉದಾಹರಣೆಗೆ, HA 7 ಪ್ರೋಟೀನ್ ಮತ್ತು NA 9 ಪ್ರೋಟೀನ್ ಹೊಂದಿರುವ ವೈರಸ್ ಅನ್ನು ‘H7N9’ ವೈರಸ್ ನ ಉಪ ವಿಭಾಗ (Subtype) ಎಂದು ಕರೆಯಲಾಗುತ್ತದೆ.

  1. ಸುಮಾರು 18 ಎಚ್‌ಎ ಉಪವಿಭಾಗಗಳು ಮತ್ತು 11 ಎನ್‌ಎ (18 HA subtypes and 11 NA subtypes) ಉಪವಿಭಾಗಗಳಿವೆ.
  2. ಈ ಎರಡು ಪ್ರೋಟೀನ್‌ಗಳ ಹಲವಾರು ಸಂಯೋಜನೆಗಳ ಸಾಧ್ಯತೆ ಇದೆ, ಉದಾ., H5N1, H7N2, H9N6, H17N10, ಇತ್ಯಾದಿ.

ಹರಡುವಿಕೆ:

  1. ಮಾನವರಲ್ಲಿ ಏವಿಯನ್ ಮತ್ತು ಸ್ವೈನ್ (ಹಂದಿ) ಇನ್ಫ್ಲುಯೆನ್ಸ ಸೋಂಕಿನ ವರದಿಗಳು ಕಂಡು ಬಂದಿವೆ.
  2. ಈ ಸೋಂಕು ಸರಿ ಸುಮಾರು 60% ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವುದರಿಂದ ಇದು ಮಾರಣಾಂತಿಕವಾಗಿದೆ.
  3. ಏವಿಯನ್ ಫ್ಲೂ ವೈರಸ್ ಸೋಂಕಿತ ಪಕ್ಷಿಗಳ ಲಾಲಾರಸ(Saliva), ಲೋಳೆ(Mucus) ಮತ್ತು ಮಲದ (Poop) ಮೂಲಕ ಹರಡುತ್ತದೆ, ಮತ್ತು ಈ ವೈರಸ್ ಮನುಷ್ಯನ ಕಣ್ಣು, ಮೂಗು ಅಥವಾ ಬಾಯಿಯ ಸಂಪರ್ಕಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಂದಾಗ ಅಥವಾ ಉಸಿರಾಟದ ಪ್ರಕ್ರಿಯೆಯಲ್ಲಿ ಈ ಸೋಂಕಿತ ವಸ್ತುಗಳನ್ನು ಉಸಿರಾಡುವ ಮೂಲಕ ಮಾನವರು ಸೋಂಕಿಗೆ ಒಳಗಾಗಬಹುದು.

ಪಕ್ಷಿ ಜ್ವರದ ವಿವಿಧ ತಳಿಗಳು:

  1. ಚೀನಾದಲ್ಲಿ ಪ್ರಾಣಿಗಳಲ್ಲಿ ಹಲವಾರು ಪಕ್ಷಿ ಜ್ವರಗಳು ಕಂಡುಬಂದಿವೆ, ಆದರೆ ಮಾನವರಲ್ಲಿ ಇನ್ನೂ ದೊಡ್ಡ ಪ್ರಮಾಣದ ಅಥವಾ ಸಾಮೂಹಿಕವಾಗಿ ಏಕಾಏಕಿ ಹರಡುವಿಕೆಯು ಸಂಭವಿಸಿಲ್ಲ.
  2. ಚೀನಾದಲ್ಲಿ ಪಕ್ಷಿ ಜ್ವರದಿಂದ ಉಂಟಾದ ಕೊನೆಯ ಮಾನವ ಸಾಂಕ್ರಾಮಿಕ ರೋಗವು 2016–2017ರ ಅವಧಿಯಲ್ಲಿ H7N9 ವೈರಸ್‌ನಿಂದ ಉಂಟಾಗಿದೆ.
  3. H5N8 ‘ಇನ್ಫ್ಲುಯೆನ್ಸ A’ ವೈರಸ್‌ನ ಉಪವಿಭಾಗವಾಗಿದೆ (ಇದನ್ನು ಪಕ್ಷಿ ಜ್ವರ ವೈರಸ್ ಎಂದೂ ಕರೆಯುತ್ತಾರೆ). H5N8, ಮಾನವರಿಗೆ ಕಡಿಮೆ ಅಪಾಯಕಾರಿಯಾದರೂ, ಕಾಡು ಪಕ್ಷಿಗಳು ಮತ್ತು ದೇಶೀಯ ಕೋಳಿಗಳಿಗೆ ಹೆಚ್ಚು ಮಾರಕವಾಗಿದೆ. ಪ್ಯಾರಿಸ್ ಮೂಲದ ವರ್ಲ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ಪ್ರಕಾರ, H5N8 ಏವಿಯನ್ ಇನ್ಫ್ಲುಯೆನ್ಸವು ಪಕ್ಷಿಗಳ ಕಾಯಿಲೆಯಾಗಿದ್ದು, ಇದು Type “A” influenza viruse ಗಳಿಂದ ಉಂಟಾಗುತ್ತದೆ, ಇದು ಕೋಳಿಗಳು, ಟರ್ಕಿ ಕೋಳಿಗಳು, ಕ್ವಿಲ್ಗಳು, ಗಿನಿಯಿಲಿ ಮತ್ತು ಬಾತುಕೋಳಿಗಳು ಸೇರಿದಂತೆ ಅನೇಕ ಜಾತಿಗಳ ದೇಶೀಯ ಕೋಳಿಗಳ ಮೇಲೆ ಪರಿಣಾಮ ಬೀರುತ್ತದೆ. , ಹಾಗೆಯೇ ಸಾಕುಪ್ರಾಣಿಗಳು, ಕಾಡು ವಲಸೆ ಹಕ್ಕಿಗಳು ಮತ್ತು ನೀರು ಹಕ್ಕಿಗಳನ್ನು ಒಳಗೊಂಡಂತೆ ಪರಿಣಾಮ ಬೀರುತ್ತದೆ.
  4. ಏಪ್ರಿಲ್ ನಲ್ಲಿ, ಈಶಾನ್ಯ ಚೀನಾದ ಶೆನ್ಯಾಂಗ್ ನಗರದ, ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ H5N6 ಏವಿಯನ್ ಫ್ಲೂ ಸೋಂಕು ಪತ್ತೆಯಾಗಿದೆ.

ಈ ವೈರಸ್ ಮನುಷ್ಯರಿಗೆ ವರ್ಗಾವಣೆಯಾಗಬಲ್ಲದೇ?

ಮಾನವರಲ್ಲಿ ಎಚ್ 5 ಎನ್ 8 (H5N8) ಪ್ರಕರಣಗಳು ಕಂಡು ಬಂದಿಲ್ಲ. ಸಾಮಾನ್ಯ ಜನರಿಗೆ ಇದರ ಅಪಾಯ ತುಂಬಾ ಕಡಿಮೆ. ಕೋಳಿ ಮಾಂಸ ಅಥವಾ ಮೊಟ್ಟೆಗಳ ಸೇವನೆಯಿಂದ ವೈರಸ್  ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ನಿಯಂತ್ರಣ ಮತ್ತು ಕಂಟೈನ್ ಮೆಂಟ್  ಕಾರ್ಯಾಚರಣೆಗಳ ಸಮಯದಲ್ಲಿ ಅನಾರೋಗ್ಯಕರ / ಸತ್ತ ಪಕ್ಷಿಗಳು ಮತ್ತು ಕಲುಷಿತ ವಸ್ತುಗಳನ್ನು ನಿರ್ವಹಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.ಚನ್ನಾಗಿ ಬೇಯಿಸಿದ ಕೋಳಿ ಮಾಂಸದ  ಸೇವನೆಯು ಸುರಕ್ಷಿತವೆಂದು ಪರಿಗಣಿಸಲಾಗಿದೆ.

ನಿಯಂತ್ರಣ ಕ್ರಮಗಳುಃ

ಪ್ರಾಣಿಗಳಲ್ಲಿ ಸೋಂಕು ಪತ್ತೆಯಾದಾಗ ಅದನ್ನು ನಿಯಂತ್ರಿಸಲು ಅವುಗಳ ಸಾಮೂಹಿಕ ವಧೆಯನ್ನು (Culling) ಸಾಮಾನ್ಯವಾಗಿ ಕೈಗೊಳ್ಳಲಾಗುತ್ತದೆ.ಕೊಲ್ಲುವ ಜೊತೆಗೆ, ಅಂತಹ ಎಲ್ಲಾ ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸಹ ಮುಖ್ಯವಾಗಿದೆ. ಸೋಂಕಿತ ಆವರಣದ ಸ್ವಚ್ಛಗೊಳಿಸುವಿಕೆ ಕಾರ್ಯವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕಲುಷಿತ ವಾಹನಗಳು ಮತ್ತು ಸಿಬ್ಬಂದಿಗಳು ಇತರರ ಸಂಪರ್ಕಕ್ಕೆ ಬರದಂತೆ ನಿರ್ಬಂಧಿಸುವ (ಕ್ವಾರಂಟೈನ್)  ಕ್ರಮ ಕೈಗೊಳ್ಳಬೇಕು.

 

ವಿಷಯಗಳು : ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಏಜೆನ್ಸಿಗಳು ಮತ್ತು ವೇದಿಕೆಗಳು ಅವುಗಳ ರಚನೆ ಮತ್ತು ಆದೇಶ.

ವಿಶ್ವ ಚಿನ್ನ ಮಂಡಳಿ:


(World Gold Council)

ಸಂದರ್ಭ :

ವಿಶ್ವ ಚಿನ್ನ ಮಂಡಳಿ (World Gold Council) ಯ ‘ಭಾರತದಲ್ಲಿ ಬುಲಿಯನ್ ಟ್ರೇಡ್’ ವರದಿಯ ಪ್ರಕಾರ:

  1. ಚಿನ್ನದ ಆಮದುಗಳು 2016-2020 ರ ನಡುವೆ ಭಾರತದ ಚಿನ್ನದ ಪೂರೈಕೆಯ ಶೇಕಡಾ 86 ರಷ್ಟಿದೆ ಮತ್ತು ದೇಶದಲ್ಲಿ ‘ಹೆಚ್ಚಿನ ಆಮದು ಸುಂಕಗಳ’ (Import Duty) ಹೊರತಾಗಿಯೂ ಚಿನ್ನದ ಆಮದು ಹೆಚ್ಚುತ್ತಲೇ ಇದೆ.
  2. 2012 ರಲ್ಲಿ ಮೊದಲ ಸುಂಕ ಹೆಚ್ಚಳದ ನಂತರ, ಭಾರತವು ಸುಮಾರು 6,581 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ, ಅಂದರೆ ವರ್ಷಕ್ಕೆ ಸರಾಸರಿ 730 ಟನ್‌ಗಳು.
  3. 2020 ರಲ್ಲಿ, ಭಾರತವು 30 ಕ್ಕೂ ಹೆಚ್ಚು ದೇಶಗಳಿಂದ 377 ಟನ್ ಚಿನ್ನದ ಗಟ್ಟಿಗಳನ್ನು ಆಮದು ಮಾಡಿಕೊಂಡಿದೆ. ಇವುಗಳಲ್ಲಿ, 55 ಪ್ರತಿಶತವನ್ನು ಕೇವಲ ಎರಡು ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ, ಸ್ವಿಟ್ಜರ್ಲೆಂಡ್ (ಶೇ. 44) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಶೇ. 11).
  4. ಕಳೆದ ಐದು ವರ್ಷಗಳಲ್ಲಿ, ಹಳದಿ ಲೋಹದ ಒಟ್ಟು ಅಧಿಕೃತ ಆಮದುಗಳಲ್ಲಿ ಚಿನ್ನದ ಡೋರ್ ಆಮದು ಶೇಕಡಾ 30 ರಷ್ಟಿದೆ.

ಚಿನ್ನ ಮತ್ತು ಆರ್ಥಿಕತೆ: Gold & Economy:

ಕರೆನ್ಸಿಯಾಗಿ: 20 ನೇ ಶತಮಾನದಲ್ಲಿ, ಚಿನ್ನವನ್ನು ಜಾಗತಿಕ ಮೀಸಲು ಕರೆನ್ಸಿಯಾಗಿ ಹೆಚ್ಚಿನ ಅವಧಿಗೆ ಬಳಸಲಾಗುತ್ತಿತ್ತು. ಚಿನ್ನದ ಗುಣಮಟ್ಟ  (Gold Standard) ವನ್ನು  ಅಮೆರಿಕ ಸಂಯುಕ್ತ ಸಂಸ್ಥಾನವು 1971 ರವರೆಗೆ ಬಳಸುತ್ತಲೇ ಇತ್ತು.

ಹಣದುಬ್ಬರದ ವಿರುದ್ಧದ ಬೇಲಿಯಾಗಿ ( ಉಳಿತಾಯ ರೂಪದಲ್ಲಿ) : ಅಂತರ್ಗತ ಮೌಲ್ಯ ಮತ್ತು ಸೀಮಿತ ಪೂರೈಕೆಯಿಂದಾಗಿ ಹಣದುಬ್ಬರದ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು  ದುರ್ಬಲಗೊಳಿಸಲು ಸಾಧ್ಯವಿಲ್ಲದ ಕಾರಣ, ಚಿನ್ನವು ಇತರ ರೂಪದ ಕರೆನ್ಸಿಗಳಿಗಿಂತ ಉತ್ತಮ ಬೆಲೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ವಿತ್ತೀಯ ಸಾಮರ್ಥ್ಯ:

ಒಂದು ದೇಶವು ರಫ್ತುಗಿಂತ ಹೆಚ್ಚಿನದನ್ನು ಆಮದು ಮಾಡಿಕೊಂಡಾಗ, ಅದರ ಕರೆನ್ಸಿಯ ಮೌಲ್ಯವು ಕುಸಿಯುತ್ತದೆ. ಮತ್ತೊಂದೆಡೆ, ಒಂದು ದೇಶವು ನಿವ್ವಳ ರಫ್ತುದಾರನಾಗಿದ್ದರೆ, ಅದರ ಕರೆನ್ಸಿಯ ಮೌಲ್ಯವು ಹೆಚ್ಚಾಗುತ್ತದೆ. ಹೀಗಾಗಿ, ಚಿನ್ನವನ್ನು ರಫ್ತು ಮಾಡುವ ಅಥವಾ ಚಿನ್ನದ ಸಂಗ್ರಹವನ್ನು ಹೊಂದಿರುವ ದೇಶಗಳು, ಚಿನ್ನದ ಬೆಲೆಗಳು ಹೆಚ್ಚಾದಂತೆ ಅವುಗಳ ವಿತ್ತೀಯ ಶಕ್ತಿಯು ಹೆಚ್ಚಾಗುತ್ತದೆ, ಅವುಗಳ ಒಟ್ಟು ರಫ್ತಿನ ಮೌಲ್ಯವು ಹೆಚ್ಚಾಗುತ್ತದೆ.

Current affairs

 

ವಿಶ್ವ ಚಿನ್ನ ಮಂಡಳಿಯ ಕುರಿತು :

  1. ಇದು ಚಿನ್ನದ ಉದ್ಯಮಕ್ಕೆ ಇರುವ ಮಾರುಕಟ್ಟೆ ಅಭಿವೃದ್ಧಿ ಸಂಸ್ಥೆಯಾಗಿದೆ.
  2. ಇದು ಚಿನ್ನದ ಗಣಿಗಾರಿಕೆಯಿಂದ ಹಿಡಿದು ಹೂಡಿಕೆಯವರೆಗಿನ ಉದ್ಯಮದ ಎಲ್ಲಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತದೆ ಮತ್ತು ಚಿನ್ನದ ಬೇಡಿಕೆಯನ್ನು ಉತ್ತೇಜಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.
  3. ಇದು ವಿಶ್ವದ ಪ್ರಮುಖ ಚಿನ್ನದ ಗಣಿಗಾರಿಕೆ ಕಂಪನಿಗಳನ್ನು ಒಳಗೊಂಡಿರುವ ಸಂಘವಾಗಿದೆ.
  4. ಇದು ಜವಾಬ್ದಾರಿಯುತ ರೀತಿಯಲ್ಲಿ ಗಣಿಗಾರಿಕೆ ಮಾಡಲು ತನ್ನ ಸದಸ್ಯರನ್ನು ಬೆಂಬಲಿಸುತ್ತದೆ ಮತ್ತು ಸಂಘರ್ಷರಹಿತ ಚಿನ್ನದ ಮಾನದಂಡವನ್ನು ಅಭಿವೃದ್ಧಿಪಡಿಸುವಲ್ಲಿ ಕೂಡ ತನ್ನ ಸದಸ್ಯರನ್ನು ಬೆಂಬಲಿಸುತ್ತದೆ.
  5. ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವ ಚಿನ್ನ ಮಂಡಳಿಯು, ಭಾರತ, ಚೀನಾ, ಸಿಂಗಾಪುರ್, ಜಪಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಗಳಲ್ಲಿ ಕಚೇರಿಗಳನ್ನು ಹೊಂದಿದೆ.

Current affairs

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನ್ಯೂಜಿಲೆಂಡ್‌ ನ ಜೀವಮಾನ ನಿಷೇಧ:

(New Zealand’s lifetime ban) 

  1. ನ್ಯೂಜಿಲೆಂಡ್ ಪ್ರಸ್ತುತ 14 ವರ್ಷ ಮೇಲ್ಪಟ್ಟ ಯಾರೆ ಆಗಲಿ, ಅಂದರೆ 2008 ರ ನಂತರ ದೇಶದಲ್ಲಿ ಜನಿಸಿದ ಯಾರು ಸಹ, ಜೀವನಪರ್ಯಂತ ಸಿಗರೇಟ್ ಖರೀದಿಸುವುದನ್ನು ನಿಷೇಧಿಸುತ್ತದೆ, ಈಗ ಯಾವುದೇ ಯುವಕರು ತಮ್ಮ ಜೀವನದುದ್ದಕ್ಕೂ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
  2. ನ್ಯೂಜಿಲೆಂಡ್ ಸರ್ಕಾರವು 2022 ರ ಅಂತ್ಯದ ವರೆಗೆ ಈ ಅತ್ಯಂತ ಕಠಿಣ ಕಾನೂನನ್ನು ಜಾರಿಗೆ ತರಲು ಯೋಜಿಸಿದೆ.ಈ ನಿಷೇಧವು ತಂಬಾಕು ಬಳಕೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಪ್ರಪಂಚದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳಲ್ಲಿ ಅತ್ಯಂತ ಕಠಿಣವಾಗಿದೆ, ಇದು ದೇಶದ ಸ್ಥಳೀಯ ಮಾವೊರಿ ಬುಡಕಟ್ಟು ಜನಸಂಖ್ಯೆಯ ಮೇಲೆ ಅಸಮಾನ ಪರಿಣಾಮವನ್ನು ಕೇಂದ್ರೀಕರಿಸುವ ವಿಶಾಲ ಯೋಜನೆಯ ಭಾಗವಾಗಿದೆ.
  3. ತಂಬಾಕು ಪದಾರ್ಥಗಳಿಲ್ಲದ ಅಥವಾ ಪ್ಲೇನ್ ಸಿಗರೇಟ್ ಪ್ಯಾಕೇಜಿಂಗ್ ಅನ್ನು ಕಡ್ಡಾಯಗೊಳಿಸಿದ 17 ದೇಶಗಳಲ್ಲಿ ಈಗಾಗಲೇ ನ್ಯೂಜಿಲೆಂಡ್ ಕೂಡ ಒಂದಾಗಿದೆ.

 

 

ಜ್ಞಾನಪೀಠ ಪ್ರಶಸ್ತಿ:

(Jnanpith Award)

ಇತ್ತೀಚೆಗೆ, ಕ್ರಮವಾಗಿ 2021 ಮತ್ತು 2022 ನೇ ಸಾಲಿನ 56 ಮತ್ತು 57 ನೇ ಜ್ಞಾನಪೀಠ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಈ ಪ್ರಶಸ್ತಿಯನ್ನು 2021 ರ ವರ್ಷಕ್ಕೆ ಅಸ್ಸಾಮಿ ಸಾಹಿತಿ ನೀಲಮಣಿ ಫುಕನ್ ಮತ್ತು 2022 ವರ್ಷಕ್ಕೆ ಕೊಂಕಣಿ ಸಾಹಿತಿ / ಕಾದಂಬರಿಕಾರ ದಾಮೋದರ್ ಮೌಜೊ ಅವರಿಗೆ ನೀಡಲಾಗುವುದು.

  1. ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ‘ಜ್ಞಾನಪೀಠ’ ಪ್ರಶಸ್ತಿಯನ್ನು ಬರಹಗಾರರಿಗೆ ಅವರು ‘ಸಾಹಿತ್ಯಕ್ಕೆ ನೀಡಿದ ಅತ್ಯುತ್ತಮ ಕೊಡುಗೆ’ಗಾಗಿ ನೀಡಲಾಗುತ್ತದೆ.
  2. ಆಂಗ್ಲ ಭಾಷೆ ಸೇರಿದಂತೆ ಭಾರತದ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಭಾರತೀಯ ಭಾಷೆಗಳಲ್ಲಿ ಬರೆಯುವುದಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗುತ್ತದೆ.
  3. ಈ ಪ್ರಶಸ್ತಿಯನ್ನು ಭಾರತೀಯ ನಾಗರಿಕರಿಗೆ ಮಾತ್ರ ಮತ್ತು ವಾರ್ಷಿಕವಾಗಿ ನೀಡಲಾಗುತ್ತದೆ.
  4. ಪ್ರಶಸ್ತಿಯು, 11 ಲಕ್ಷ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಕಲಿಕೆಯ ದೇವತೆಯಾದ ವಾಗ್ದೇವಿ (ಸರಸ್ವತಿ)ಯ ಕಂಚಿನ ಪ್ರತಿಕೃತಿಯನ್ನು ನೀಡಲಾಗುತ್ತದೆ.
  5. ‘ಭಾರತೀಯ ಜ್ಞಾನಪೀಠ’ ಎಂಬ ಸಾಂಸ್ಕೃತಿಕ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡುತ್ತದೆ.

current Affairs

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment