[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 21ನೇ ಜುಲೈ 2021 – PuuchoIAS


 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. 97 ನೇ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರಿಸಲಾಗಿದ್ದ ಕೆಲವು ಅಂಶಗಳನ್ನು ರದ್ದುಪಡಿಸಲಾಗಿದೆ.

2. ತ್ವರಿತ ವಿಚಾರಣೆ ಮೂಲಭೂತ ಹಕ್ಕು: ಸುಪ್ರೀಮ್ ಕೋರ್ಟ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನ್ಯೂ ಶೆಫರ್ಡ್ ರಾಕೆಟ್ ವ್ಯವಸ್ಥೆ ಎಂದರೇನು?

2. ರಾಷ್ಟ್ರೀಯ ಭದ್ರತಾ ಕಾಯ್ದೆ (NSA), 1980.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸ್ವಿಸ್ ಆಲ್ಪ್ಸ್ ನಲ್ಲಿ 1,000 ಕ್ಕೂ ಹೆಚ್ಚು ಸರೋವರಗಳನ್ನು ಸೃಷ್ಟಿಸಿದ ಹವಾಮಾನ ಬದಲಾವಣೆ.

2. ರಾಷ್ಟ್ರೀಯ ಲಾಜಿಸ್ಟಿಕ್ಸ್ ಎಕ್ಸಲೆನ್ಸ್ ಪ್ರಶಸ್ತಿಗಳು.

3. ಡೈರಿ ಇನ್ವೆಸ್ಟ್ಮೆಂಟ್ ಆಕ್ಸಿಲರೇಟರ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

97 ನೇ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರಿಸಲಾಗಿದ್ದ ಕೆಲವು ಅಂಶಗಳನ್ನು ರದ್ದುಪಡಿಸಲಾಗಿದೆ:


(Part of Constitution inserted by 97th amendment quashed)

 ಸಂದರ್ಭ:

ಸುಪ್ರೀಂ ಕೋರ್ಟ್ ಜುಲೈ 20 ರಂದು 2: 1 ಬಹುಮತದ ತೀರ್ಪಿನಲ್ಲಿ 97 ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ ಆದರೆ, ಸಹಕಾರ ಸಂಘಗಳ ಕಾರ್ಯವೈಖರಿ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿ ಸಂವಿಧಾನಕ್ಕೆ ಮಾಡಲಾಗಿದ್ದ 97ನೇ ತಿದ್ದುಪಡಿ ಕೆಲವು ಅಂಶಗಳನ್ನು ರದ್ದುಪಡಿಸಿದೆ. ಅಥವಾ

ಸಹಕಾರ ಸಂಘಗಳ ನಿರ್ವಹಣೆಗೆ ಸಂಬಂಧಿಸಿ ಸಂವಿಧಾನದ 97ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್‌, ಸಂಘಗಳ ರಚನೆ ಹಾಗೂ ಕಾರ್ಯಾಚರಣೆ ಕುರಿತ ತಿದ್ದುಪಡಿಯ ಭಾಗವನ್ನು ರದ್ದುಗೊಳಿಸಿದೆ.

 

97 ನೇ ಸಾಂವಿಧಾನಿಕ ತಿದ್ದುಪಡಿ:

  1. ಇದು ದೇಶದಲ್ಲಿರುವ ಸಹಕಾರ ಸಂಘಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿತು.
  2. ಸಹಕಾರಿ ಸೊಸೈಟಿಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿದ್ದ ಸಂವಿಧಾನದ 97ನೇ ತಿದ್ದುಪಡಿಗೆ ಸಂಸತ್‌ 2011ರ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ನಂತರ, 2012ರ ಫೆಬ್ರುವರಿ 15 ರಿಂದ ಜಾರಿಗೊಳಿಸಲಾಗಿತ್ತು.
  3. ಇದು ಸಹಕಾರಿ ಸಂಘಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಸಂವಿಧಾನದ ಆರ್ಟಿಕಲ್ 19 (1) (ಸಿ) ಗೆ ತಿದ್ದುಪಡಿ ಮಾಡಿತು ಮತ್ತು ಅವುಗಳಿಗೆ ಸಂಬಂಧಿಸಿದ ಆರ್ಟಿಕಲ್ 43 B ಮತ್ತು ಭಾಗ IX B ಅನ್ನು ಸೇರಿಸಿತು.

 

ಸುಪ್ರೀಂಕೋರ್ಟ್‌,ಸಂಘಗಳ ರಚನೆ ಹಾಗೂ ಕಾರ್ಯಾಚರಣೆ ಕುರಿತ ತಿದ್ದುಪಡಿಯ ಭಾಗವನ್ನು ರದ್ದುಗೊಳಿಸಲು ಕಾರಣ?

  1. ರಾಜ್ಯಪಟ್ಟಿಯಲ್ಲಿರುವ ಸಹಕಾರಿ ಕ್ಷೇತ್ರದ ಸೊಸೈಟಿಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಸಂಸತ್‌ಗೆ ಅವಕಾಶ ಇಲ್ಲ ಎಂದು ತಿಳಿಸಿದ್ದ ಗುಜರಾತ್‌ ಹೈಕೋರ್ಟ್‌, 2013ರಲ್ಲಿ, 97 ನೇ ಸಾಂವಿಧಾನಿಕ ತಿದ್ದುಪಡಿಯ ಕೆಲವು ನಿಬಂಧನೆಗಳನ್ನು ತಿರಸ್ಕರಿಸಿತ್ತು. ಗುಜರಾತ್ ಹೈಕೋರ್ಟ್‌ ನ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಮ್ ಕೋರ್ಟ್ ಸಹಕಾರಿ ಕ್ಷೇತ್ರವು ರಾಜ್ಯ ಪಟ್ಟಿಯ ವಿಷಯವಾದ್ದರಿಂದ ಸಂಸತ್ತು, ಸಹಕಾರಿ ಸಂಘಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
  2. ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ಈ ತಿದ್ದುಪಡಿಯು ರಾಜ್ಯಗಳ ವಿಶೇಷ ಡೊಮೇನ್‌ಗೆ ನೇರ ಪ್ರವೇಶ ಹೊಂದಲು ಅವಕಾಶ ನೀಡಿದೆ ಎಂದು ಹಲವಾರು ಮಧ್ಯವರ್ತಿಗಳು ವಾದಿಸಿದ್ದಾರೆ.
  3. ಆದಾಗ್ಯೂ, ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವ ರಾಜ್ಯಗಳ ಅಧಿಕಾರವನ್ನು ಈ ತಿದ್ದುಪಡಿಯು ಮೊಟಕು ಗೊಳಿಸುವುದಿಲ್ಲ ಎಂದು ಕೇಂದ್ರವು ವಾದಿಸಿದೆ.

 

ಕೇಂದ್ರ ಸರ್ಕಾರದ ಇಂತಹ ಕ್ರಮಗಳ ಹಿಂದಿನ ತಾರ್ಕಿಕತೆ ಏನು?

ಸಹಕಾರಿ ಸಂಘಗಳ ನಿರ್ವಹಣೆಯಲ್ಲಿ ಏಕರೂಪತೆಯನ್ನು ತರಲು ಈ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ ಮತ್ತು ಅದು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರವು ಹೇಳಿದೆ.

  1. ಆದರೆ, ಕೇಂದ್ರವು ಸಹಕಾರಿ ಸಂಘಗಳ ನಿರ್ವಹಣೆಯಲ್ಲಿ ಏಕರೂಪತೆಯನ್ನು ಸಾಧಿಸಲು ಬಯಸಿದರೆ ಅದು ಹೊಂದಿರುವ ಏಕೈಕ ಮಾರ್ಗವೆಂದರೆ ಸಂವಿಧಾನದ 252 ನೇ ವಿಧಿಯ ಅಡಿಯಲ್ಲಿ ಎರಡು ಅಥವಾ ಹೆಚ್ಚಿನ ರಾಜ್ಯಗಳ ಒಪ್ಪಿಗೆಯಿಂದ ಶಾಸನ ರಚಿಸುವ ಸಂಸತ್ತಿನ ಅಧಿಕಾರ ಬಳಸಿ ಕೊಳ್ಳುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 

ಮುಂದಿನ ನಡೆ?

  1. ಸಹಕಾರಿ ಸಂಘಗಳ ವಿಷಯವು ರಾಜ್ಯ ಪಟ್ಟಿಯಲ್ಲಿ ಸೇರಿದೆ ಮತ್ತು ಈ ಕುರಿತು ಶಾಸನ ರಚನೆ ಮಾಡುವ “ಸಂಪೂರ್ಣ ಮತ್ತು ನಿರ್ದಿಷ್ಟವಾದ ಅಧಿಕಾರವು ರಾಜ್ಯ ಶಾಸಕಾಂಗಗಳಿಗೆ ಸೇರಿದೆ” ಮತ್ತು ಸಹಕಾರಿ ಸಂಘಗಳ ವಿಷಯದಲ್ಲಿ ಯಾವುದೇ ಬದಲಾವಣೆ ತರಲು ಕೇಂದ್ರ ಸರ್ಕಾರ ಬಯಸಿದರೆ ಸಂವಿಧಾನದ 368 (2) ನೇ ವಿಧಿಯ ಅನ್ವಯ ರಾಜ್ಯ ಶಾಸಕಾಂಗಗಳಲ್ಲಿ ಕನಿಷ್ಠ ಅರ್ಧದಷ್ಟು ರಾಜ್ಯ ಶಾಸಕಾಂಗಗಳ ಅಂಗೀಕಾರದ ಅಗತ್ಯವಿರುತ್ತದೆ.
  2. ಈಗ, ಭಾರತದ ಸಂವಿಧಾನದ ಭಾಗ IXB ರಾಜ್ಯಗಳ ಒಳಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಬಹುರಾಜ್ಯ ಸಹಕಾರ ಸಂಘಗಳಿಗೆ ಮಾತ್ರ ಅನ್ವಯ ವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

 

ದಯವಿಟ್ಟು ಗಮನಿಸಿ:

  1. ಕೆಲವು ನಿರ್ಬಂಧಗಳಿಗೆ ಒಳಪಟ್ಟು ಸಂಘಟನೆ, ಸಂಘ, ಸಹಕಾರ ಸಂಘಗಳ ರಚನೆಯ ಸ್ವಾತಂತ್ರ್ಯದ ಖಾತರಿಯನ್ನು 19(1)(ಸಿ) ವಿಧಿಯು ನೀಡುತ್ತದೆ. ವಿಧಿ 43 B ಪ್ರಕಾರ, ಸಹಕಾರ ಸಂಘಗಳ ಸ್ವಯಂ ಪ್ರೇರಿತ ರಚನೆ, ಸ್ವಾಯತ್ತ ನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಮತ್ತು ವೃತ್ತಿಪರ ನಿರ್ವಹಣೆಗೆ ರಾಜ್ಯಗಳು ಪ್ರೋತ್ಸಾಹ ನೀಡಬಹುದು.
  2. 97ನೇ ತಿದ್ದುಪಡಿಯ ಮೂಲಕ ಸೇರಿಸಲಾದ ಭಾಗ 9B ಯು ಸಹಕಾರ ಸಂಘಗಳ ಸಂಯೋಜನೆ, ಆಡಳಿತ ಮಂಡಳಿ ಸದಸ್ಯರು ಮತ್ತು ಇತರ ಪದಾಧಿಕಾರಿಗಳ ಅಧಿಕಾರಾವಧಿ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದೆ.
  3. ಬಹುರಾಜ್ಯ ಸಹಕಾರ ಸಂಘಗಳು ಮತ್ತು ಇತರ ಸಹಕಾರ ಸಂಘಗಳು ಎಂಬುದನ್ನು ಪ್ರತ್ಯೇಕಾಗಿಯೇ ನೀಡಬೇಕು ಎಂಬುದು ಸ್ಪಷ್ಟ. ಬಹುರಾಷ್ಟ್ರೀಯ ಸಹಕಾರ ಸಂಘಗಳ ವಿಚಾರದಲ್ಲಿ ಸಂಸತ್ತಿಗೆ ಅಧಿಕಾರವಿದೆ. ಆದರೆ ಇತರ ಸಹಕಾರ ಸಂಘಗಳ ವಿಚಾರದಲ್ಲಿ ರಾಜ್ಯಗಳು ಅಗತ್ಯ ಕಾನೂನು ರೂಪಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಕೇಂದ್ರದ ವಾದ:

ಭಾಗ 9 Bಅವಕಾಶಗಳನ್ನು ಉಪಯೋಗಿಸಿ 28 ರಾಜ್ಯಗಳ ಪೈಕಿ 17 ರಾಜ್ಯಗಳು ಕಾಯ್ದೆಗಳನ್ನು ರಚಿಸಿವೆ. ಹಾಗಾಗಿ, ಭಾಗ 9 Bಯಲ್ಲಿರುವ ನಿರ್ಬಂಧಗಳನ್ನು ಈ ರಾಜ್ಯಗಳು ಒಪ್ಪಿವೆ ಎಂಬ ಕೇಂದ್ರದ ವಾದವನ್ನು ಸುಪ್ರೀಮ್ ಕೋರ್ಟ್ ಮಾನ್ಯ ಮಾಡಿಲ್ಲ.

 

ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಹಕಾರಿ ಕಾಯ್ದೆ ತಿದ್ದುಪಡಿಗೆ ವ್ಯಾಪಕ ವಿರೋಧ:

ಕರ್ನಾಟಕ ರಾಜ್ಯ ಸರಕಾರ ಸಹ ಸಹಕಾರ ಸಂಘಗಳ ಕಾಯಿದೆಗೆ ತಿದ್ದುಪಡಿ ಮಾಡಿದ ಕುರಿತು ಸಹಕಾರಿ ಕ್ಷೇತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸಂವಿಧಾನದ 97ನೇ ತಿದ್ದುಪಡಿ ಮೂಲಕ 2011ರಲ್ಲಿ ಸಹಕಾರ ಸಂಘಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಲಾಗಿತ್ತು. ಇದರಿಂದಾಗಿ ಸಹಕಾರ ಸಂಘಗಳ ಸ್ಥಾಪನೆ ನಾಗರಿಕರ ಮೂಲಭೂತ ಹಕ್ಕು ಎಂದು ಪರಿಗಣಿಸಲ್ಪಟ್ಟಿತು. ಸಹಕಾರ ಸಂಸ್ಥೆಗಳ ಸ್ವಇಚ್ಛೆಯ ರಚನೆ, ಸ್ವಾಯತ್ತ ಕಾರ್ಯಾಚರಣೆ, ಪ್ರಜಾಸತ್ತಾತ್ಮಕ ಹತೋಟಿ ಮತ್ತು ವೃತ್ತಿಪರ ವ್ಯವಸ್ಥಾಪನೆ ಮತ್ತು ನಿರ್ವಹಣೆಗಳನ್ನು ಪ್ರೋತ್ಸಾಹಿಸುವುದು ಈ ತಿದ್ದುಪಡಿಯ ಪ್ರಮುಖ ಆಶಯವಾಗಿದ್ದವು. ಅದಕ್ಕನುಸರಿಸಿ ಕರ್ನಾಟಕ ಸಹಕಾರಿ ಸಂಘಗಳ ಕಾಯಿದೆ 1959 -2013ರಲ್ಲಿ ತಿದ್ದುಪಡಿಗೆ ಒಳಪಟ್ಟು, ಸಹಕಾರ ಸಂಘಗಳು ರಾಜಕೀಯ ಹಸ್ತಕ್ಷೇಪ ಹಾಗೂ ಅಧಿಕಾರಿಗಳ ಹತೋಟಿಯಿಂದ ಮುಕ್ತಿ, ವೃತ್ತಿಪರ ಲೆಕ್ಕಪರಿಶೋಧನೆ, ಚುನಾವಣೆ ಆಯೋಗದ ರಚನೆ, ಚುನಾವಣೆ ತಕರಾರುಗಳು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೆ, ಅಧಿಕಾರಿಗಳ ಸೀಮಿತ ಅಧಿಕಾರ ಮುಂತಾದ ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಸಹಕಾರಿ ರಂಗದಲ್ಲಿ ಹೆಚ್ಚು ಜನಪ್ರಿಯವಾಯಿತು. ಸಹಕಾರದ ಮೌಲ್ಯವರ್ಧನೆಗೆ ಈ ತಿದ್ದುಪಡಿ ಬಹುದೊಡ್ಡ ಕೊಡುಗೆಯನ್ನು ನೀಡಿತು. ಆದರೆ ಇದೀಗ ಅಳವಡಿಸಿದ ತಿದ್ದುಪಡಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ.

ಅಂತರಾಷ್ಟ್ರೀಯ ಸಹಕಾರ ಒಕ್ಕೂಟ ಅಳವಡಿಸಿದ ಏಳು ಸಹಕಾರ ತತ್ವಗಳ ಪೈಕಿ 1). ಪ್ರಜಾಸತ್ತಾತ್ಮಕ ಸದಸ್ಯರ ಹತೋಟಿ 2). ಸ್ವಯಂಪ್ರೇರಿತ ರಚನೆ 3). ಸ್ವಾಯತ್ತೆಯನ್ನು ಸಂವಿಧಾನ ತಿದ್ದುಪಡಿಯ ಆಶಯದಲ್ಲಿ ನೇರವಾಗಿ ಪ್ರಸ್ತಾಪಿಸಲಾಗಿದೆ. 2014ರ ತಿದ್ದುಪಡಿ ಇದಾವುದನ್ನು ಪರಿಗಣಿಸದೆ ಹಿಂದಿನ ದಿನಗಳಿಗೆ ಹೋಗಿರುವುದನ್ನು ಕಾಣಬಹುದಾಗಿದೆ.

ತಿದ್ದುಪಡಿಯ ಕುರಿತು ಪ್ರಮುಖ ಆಕ್ಷೇಪಗಳು

1) ಸಹಕಾರ ಸಂಘಗಳ 1959ರ ಕಾಯಿದೆಯಲ್ಲಿ ಸಂಘದ ಉಪನಿಬಂಧನೆಗಳನ್ನು ರಚಿಸುವುದು, ತಿದ್ದುಪಡಿ ಮಾಡುವುದು ಆಡಳಿತ ಮಂಡಳಿ ಹಾಗೂ ಸರ್ವಸದಸ್ಯರ ಹಕ್ಕು. ಬೈಲಾಗಳಿಗೆ ಕಡ್ಡಾಯ ತಿದ್ದುಪಡಿಗಳನ್ನು ಮಾಡಲು ನಿಬಂಧಕರಿಗೆ ಅಧಿಕಾರ ನೀಡುತ್ತದೆ. 2013ರ ತಿದ್ದುಪಡಿಯ ಪೂರ್ವದಲ್ಲಿ ಜಾರಿಯಲ್ಲಿದ್ದ ಈ ಕಲಂಗಳನ್ನು 97ನೇ ಸಂವಿಧಾನ ತಿದ್ದುಪಡಿಯ ಆಶಯಗಳಿಗೆ ವಿರುದ್ಧವಾಗಿ ಈ ತಿದ್ದುಪಡಿಯಲ್ಲಿ ಪುನರ್ ಸ್ಥಾಪಿಸಲಾಗಿದೆ.

2) 2013ರ ತಿದ್ದುಪಡಿಯಲ್ಲಿ ಸಂಘದ ಸಿಬ್ಬಂದಿ ಸಂಖ್ಯಾಬಲ, ನೌಕರರ ಅರ್ಹತೆ, ವೇತನ ಶ್ರೇಣಿ, ಇತರ ಭತ್ತ್ಯೆಗಳು, ನೌಕರರ ಸೇವಾ ನಿಯಮಗಳನ್ನು ನಿರ್ಧರಿಸುವ ಹಕ್ಕನ್ನು ಆಡಳಿತ ಮಂಡಳಿಗೆ ನೀಡಲಾಗಿತ್ತು. ಆದರೆ 2014ರ ತಿದ್ದುಪಡಿಯಲ್ಲಿ ಸದ್ರಿ ಕಲಂಗೆ ಸಹಕಾರ ಸಂಘಗಳ ‘ನಿಯಮದಲ್ಲಿ ಹೇಳಿದಂತೆ’ ಎಂಬ ಪದವನ್ನು ಸೇರಿಸಿ ನಿಯಮ 17ರಲ್ಲಿ ಪ್ರಸ್ತಾಪಿಸಿದ ನಿಬಂಧಕರ ಅನುಮೋದನೆಯನ್ನು ಪಡೆಯುವಂತೆ ಮಾಡಲಾಗಿದೆ. ಇದು ಸಂಸ್ಥೆಯ ಸ್ವಾಯತ್ತಾ ಕಾರ್ಯಾಚರಣೆಗೆ ವಿರುದ್ಧವಾಗಿದೆ.

 3) ಆಡಳಿತ ಮಂಡಳಿಯ ಅವಧಿಯ ಪೂರ್ವಾರ್ಧದಲ್ಲಿ ಆಕಸ್ಮಿಕ ಖಾಲಿ ಬೀಳುವ ಸ್ಥಾನವನ್ನು 3 ತಿಂಗಳೊಳಗೆ ಭರ್ತಿ ಮಾಡದೇ ಇದ್ದಲ್ಲಿ ನಿಬಂಧಕರು ಖಾಲಿ ಸ್ಥಾನವನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ಇದು 97ನೇ ಸಂವಿಧಾನ ತಿದ್ದುಪಡಿಯ ಅನುಚ್ಛೇದ 243 ಝಡ್‌ಜೆ(2)ಕ್ಕೆ ವಿರುದ್ಧವಾಗಿದೆ.

4) ಕಲಂ 29ಜಿ(1) ತಿದ್ದುಪಡಿಯಲ್ಲಿ ಖಾಲಿಯಾದ ಮುಖ್ಯ ಕಾರ್ಯನಿರ್ವಾಹಕನ ಸ್ಥಾನವನ್ನು ಆಡಳಿತ ಮಂಡಳಿ 3 ತಿಂಗಳೊಳಗೆ ಭರ್ತಿ ಮಾಡದೇ ಇದ್ದ ಪಕ್ಷದಲ್ಲಿ ಸರಕಾರ ಅಥವಾ ನಿಬಂಧಕರು ಭರ್ತಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಇದು ಕೂಡಾ ಸಂಸ್ಥೆಯ ಪ್ರಜಾಸತ್ತಾತ್ಮಕ ನಿಯಂತ್ರಣ, ಮತ್ತು ಸ್ವಾಯತ್ತಾ ಕಾರ್ಯಾಚರಣೆಗೆ ವಿರುದ್ಧವಾಗಿದೆ.

5) ಸಹಕಾರ ಚುನಾವಣಾ ಆಯೋಗ ಎಂಬ ಶಬ್ದದ ಬದಲಿಗೆ ಸಹಕಾರ ಚುನಾವಣಾ ಪ್ರಾಧಿಕಾರ ಎಂಬುದಾಗಿ ಜ್ಯಾರಿಗೆ ತಂದು ಚುನಾವಣಾ ಆಯುಕ್ತರ ನೇಮಕಾತಿ ಹಾಗೂ ಆಸ್ಥಾನದಿಂದ ಅವರನ್ನು ತೆಗೆದು ಹಾಕುವ ಅಧಿಕಾರ ರಾಜ್ಯಪಾಲರಿಗೆ ಇದ್ದುದನ್ನು ‘ಸರಕಾರ’ ಕ್ಕೆ ನೀಡಿರುವುದು ಸಮಂಜಸವಲ್ಲ. ಆಯುಕ್ತರನ್ನು ಸರಕಾರದ ಅಧೀನ ಅಧಿಕಾರಿಯಾಗಿ ಪರಿಗಣಿಸಿ ಕಾಯ್ದೆ ತಿದ್ದುಪಡಿಯಾಗಿರುವುದು ಪ್ರಾಧಿಕಾರದ ನಿಷ್ಪಕ್ಷಪಾತತೆ ಹಾಗೂ ಸ್ವಾತಂತ್ರ್ಯ ದಷ್ಟಿಯಿಂದ ಸರಿಯಲ್ಲ. ರಾಜ್ಯಪಾಲರು ಚುನಾವಣಾ ಆಯುಕ್ತರನ್ನು ನೇಮಿಸುವುದು ಸೂಕ್ತ.

6) ಕಲಂ 58 ತಿದ್ದುಪಡಿಯಲ್ಲಿ ಒಂದು ಸಹಕಾರಿ ಸಂಘವು ತನ್ನ ಕಾರ್ಯವ್ಯಾಪ್ತಿಯ ಹೊರಗಡೆ ಠೇವಣಾತಿ ಯಾ ನಿಧಿಗಳನ್ನು ತೊಡಗಿಸಲು ಬಯಸಿದಲ್ಲಿ ನಿಬಂಧಕರ ಪೂರ್ವಾನುಮತಿ ಅಗತ್ಯ ಎಂಬುದಾಗಿ ಹೇಳಲಾಗಿದೆ. ಇದು ಸಹಕಾರಿ ರಂಗದ ಸ್ವಾಯತ್ತಾ ಕಾರ್ಯಾಚರಣೆಗೆ ವಿರುದ್ಧ.

7) 2013ರ ತಿದ್ದುಪಡಿಯಲ್ಲಿ ಸಹಕಾರಿ ಸಂಘಗಳ ಚುನಾವಣಾ ತಕರಾರುಗಳನ್ನು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೆ ತರಲಾಗಿತ್ತು. ಹಾಲಿ ತಿದ್ದುಪಡಿಯಲ್ಲಿ ಚುನಾವಣೆ ತಕರಾರುಗಳನ್ನು ಹಿಂದಿನಂತೆ ನಿಬಂಧಕರ ವ್ಯಾಪ್ತಿಗೆ ತರಲಾಗಿದೆ. ನಿಬಂಧಕರು ನ್ಯಾಯತೀರ್ಮಾನಗಳಲ್ಲಿ ಅನಗತ್ಯ ಒತ್ತಡ, ವಿಳಂಬ ನೀತಿಗೆ ಆಡಳಿತ ಪಕ್ಷಗಳಿಂದ ಒಳಗಾಗಿ ಸ್ವಾಭಾವಿಕ ನ್ಯಾಯನೀತಿಗಳನ್ನು ಅನುಸರಿಸಲು ಕಷ್ಟಸಾಧ್ಯ. ಆದ್ದರಿಂದ ಚುನಾವಣಾ ತಕರಾರುಗಳ ಸಹಿತ ಎಲ್ಲ ದಾವೆ ಗಳನ್ನು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೊಳಪಡಿಸುವುದು ತೀರಾ ಅಗತ್ಯ.

8) ಕಾಯ್ದೆಯ ಕಲಂ 98(ಇ) ಹಾಗೂ 98(ವೈ)ಯನ್ನು ಕೈ ಬಿಡಲಾಗಿದೆ. ಇದು ಪ್ರೊ. ವೈದ್ಯನಾಥನ್ ವರದಿಯ ಆಧಾರದ ಕಷಿ ಸಹಕಾರ ಪತ್ತಿನ ವ್ಯವಸ್ಥೆಯ ಪುನರುಜ್ಜೀವನದ ಪುನಶ್ಚೇತನ ಪ್ಯಾಕೇಜ್‌ನ ಭಾರತ ಸರ್ಕಾರ, ನಬಾರ್ಡು, ರಾಜ್ಯ ಸರಕಾರದ ನಡುವಿನ ದಿ. 25.3.2008ರ ತ್ರಿಪಕ್ಷೀಯ ಒಪ್ಪಂದದ ವಿರುದ್ಧವಾಗಿರುತ್ತದೆ. ಆದ್ದರಿಂದ ಸಹಕಾರ ಸಂಘಗಳ ಕಾಯ್ದೆ 1959ರ 2014ರ ತಿದ್ದುಪಡಿಯ ಬಹುಪಾಲು ಅಂಶಗಳನ್ನು ಕೈಬಿಟ್ಟು ಪ್ರಜಾಸತ್ತಾತ್ಮಕ ನಿಯಂತ್ರಣ, ಸ್ವಾಯತ್ತ ಕಾರ್ಯಾಚರಣೆ, ಪಾರದರ್ಶಕ ಆಡಳಿತದ ದಿಶೆಯಲ್ಲಿ ಹೊಸ ಪ್ರಸ್ತಾಪವನ್ನು ಸರಕಾರ ಮುಂದಿಡುವುದು ಅವಶ್ಯ ಎಂಬುದು ಸಹಕಾರಿಗಳ ಒತ್ತಾಯ.

 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ತ್ವರಿತ ವಿಚಾರಣೆ ಮೂಲಭೂತ ಹಕ್ಕು: ಸುಪ್ರೀಮ್ ಕೋರ್ಟ್:


(Speedy trial a fundamental right: SC)

 ಸಂದರ್ಭ:

ಭೀಮಾ ಕೋರೆಗಾಂವ್ ಜಾತಿ ಹಿಂಸಾಚಾರ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ “ತ್ವರಿತ ವಿಚಾರಣೆ ಮೂಲಭೂತ ಹಕ್ಕು” ಎಂದು ಹೇಳಿದೆ.

 

ಏನಿದು ಸಮಸ್ಯೆ?

ಪ್ರಕರಣದಲ್ಲಿ ಆರೋಪಗಳನ್ನು ನಿರೂಪಿಸಲಾಗಿಲ್ಲ. ಇನ್ನೂ ಅನೇಕ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರು ವಿಚಾರಣೆಯಿಲ್ಲದೆ ಜೈಲಿನಲ್ಲಿ ನರಳುತ್ತಿದ್ದಾರೆ.

 

ತ್ವರಿತ ವಿಚಾರಣೆಯ ಸಾಂವಿಧಾನಿಕ ಹಕ್ಕಿನ ಬಗ್ಗೆ:

  1. ತ್ವರಿತ ವಿಚಾರಣೆಯ ಮುಖ್ಯ ಗುರಿ ಸಮಾಜದಲ್ಲಿ ನ್ಯಾಯವನ್ನು ಬೆಳೆಸುವುದು.
  2. ಇದನ್ನು ಮೊದಲು,ಇಂಗ್ಲಿಷ್ ಕಾನೂನಿನ ಹೆಗ್ಗುರುತು ದಾಖಲೆಯಾದ ಮ್ಯಾಗ್ನಾ ಕಾರ್ಟಾದಲ್ಲಿ ಉಲ್ಲೇಖಿಸಲಾಗಿದೆ.
  3. ಭಾರತದಲ್ಲಿ, “ಕಾನೂನಿನ ಪ್ರಕಾರ ನಿಗದಿಪಡಿಸಲಾದ ಕಾರ್ಯವಿಧಾನವನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯನ್ನು ಆತನ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತಗೊಳಿಸುವಂತಿಲ್ಲ” ಎಂದು ಭಾರತದ ಸಂವಿಧಾನದ 21ನೇ ವಿಧಿಯು ಘೋಷಿಸುತ್ತದೆ.

 

ತ್ವರಿತ ವಿಚಾರಣೆಯ ಹಕ್ಕಿನ ವಿಕಸನ:

1978 ರ ಬಾಬು ಸಿಂಗ್ VS ಉತ್ತರಪ್ರದೇಶ ರಾಜ್ಯ ಪ್ರಕರಣ: ನ್ಯಾಯಾಲಯವು ಹೀಗೆ ಹೇಳಿದೆ, “ನಮ್ಮ ನ್ಯಾಯ ವ್ಯವಸ್ಥೆಯು ಗಂಭೀರ ಪ್ರಕರಣಗಳಲ್ಲಿಯೂ ಸಹ ನಿಧಾನ ಚಲನೆಯ ಸಿಂಡ್ರೋಮ್‌ನಿಂದ ಬಳಲುತ್ತಿದೆ, ಇದು ಅಂತಿಮ ತೀರ್ಮಾನ ಏನೇ ಇರಲಿ‘ ನ್ಯಾಯಯುತ ವಿಚಾರಣೆಗೆ ’ಮಾರಕವಾಗಿದೆ. ಒಟ್ಟಾರೆ ನ್ಯಾಯವು ಸಾಮಾಜಿಕ ನ್ಯಾಯದ ಒಂದು ಅಂಶವಾಗಿದೆ, ಏಕೆಂದರೆ ಒಟ್ಟಾರೆಯಾಗಿ, ಸಮುದಾಯವು ಅಪರಾಧಿಯನ್ನು ಪ್ರಾಮಾಣಿಕವಾಗಿ ಮತ್ತು ಅಂತಿಮವಾಗಿ ಸಮಂಜಸವಾದ ಸಮಯದೊಳಗೆ ಶಿಕ್ಷೆಗೊಳಪಡಿಸುವುದರ ಬಗ್ಗೆ ಮತ್ತು ಕ್ರಿಮಿನಲ್ ವಿಚಾರಣೆಯ ಅತಿಯಾದ ಅಗ್ನಿಪರೀಕ್ಷೆಯಿಂದ ಅಮಾಯಕರನ್ನು ಮುಕ್ತಗೊಳಿಸುವುದರ ಬಗ್ಗೆ ಕಾಳಜಿ ವಹಿಸುತ್ತದೆ.”

1979 ರ ಹುಸೇನಾರಾ ಖಾತೂನ್ VS ಬಿಹಾರ ರಾಜ್ಯ ಪ್ರಕರಣ: ಇದು ವೇಗದ ವಿಚಾರಣೆಯ ಪರಿಕಲ್ಪನೆಯ ಆಧಾರವಾಗಿದೆ. ವಿಚಾರಣೆಯಡಿಯಲ್ಲಿ ಕೈದಿಗಳು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೆ, ಅವರ ಅಪರಾಧ ಸಾಬೀತಾದರೂ ಸಹ, ಜೈಲಿನಲ್ಲಿ ಅವರನ್ನು ಬಂಧಿಸುವುದು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಮತ್ತು ಇದು 21 ನೇ ವಿಧಿಯ ಅಡಿಯಲ್ಲಿ ಖಾತರಿ ಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ.

ಕತಾರ್ ಸಿಂಗ್ VS ಪಂಜಾಬ್ ರಾಜ್ಯ ಪ್ರಕರಣ 1994: ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಘೋಷಿಸಲಾಯಿತು.

 

ಪ್ರಕರಣಗಳು ಬಾಕಿ ಉಳಿಯಲು ಕಾರಣಗಳು:

  1. ಬೃಹತ್ ಪ್ರಮಾಣದಲ್ಲಿ ಬಾಕಿ ಇರುವ ಕಾರಣ ಪ್ರಕರಣಗಳ ಇತ್ಯರ್ಥಕ್ಕೆ ಅನುಸರಿಸುವ ವಿಳಂಬ ನೀತಿ.
  2. ನ್ಯಾಯವಾದಿಗಳು / ವಕೀಲರಿಂದ ವಿಳಂಬ.
  3. ಮೂಲಸೌಕರ್ಯ ಸಮಸ್ಯೆ: ನ್ಯಾಯಾಲಯಗಳಿಗೆ ಯಾವುದೇ ಅನುಕೂಲಕರ ಕಟ್ಟಡ ಅಥವಾ ಭೌತಿಕ ಸೌಲಭ್ಯಗಳಿಲ್ಲ, ಮತ್ತು ಅಗತ್ಯ ಸಿಬ್ಬಂದಿಯ ಕೊರತೆ, ಇದರಿಂದಾಗಿ ಪ್ರಕರಣವನ್ನು ವಿಲೇವಾರಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
  4. ಪ್ರಕರಣಗಳ ಮುಂದೂಡಿಕೆಗೆ ಇರುವ ಅವಕಾಶ.
  5. ನ್ಯಾಯಾಲಯದ ರಜೆ ಸಮಯ.
  6. ಪ್ರಕರಣಗಳ ವಿಲೇವಾರಿ ವಿಳಂಬಗೊಳ್ಳಲು ಪೊಲೀಸರಂತಹ ತನಿಖಾ ಸಂಸ್ಥೆಗಳು ಸಹ ಪ್ರಮುಖ ಪಾತ್ರವಹಿಸುತ್ತವೆ.

 

ವಿಳಂಬವನ್ನು ತಡೆಯುವ ಕೆಲವು ಕ್ರಮಗಳು:

  1. ನ್ಯಾಯಾಲಯಗಳ ಪರಿಣಾಮಕಾರಿ ನಿರ್ವಹಣೆ.
  2. ಸರಿಯಾದ ಮತ್ತು ತ್ವರಿತ ತೀರ್ಪು ನೀಡುವ ಕೌಶಲ್ಯದ ಜೊತೆಗೆ ಕರಡು ರಚನೆ, ಶ್ರವಣ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸುಧಾರಿಸಲು ನ್ಯಾಯಾಧೀಶರಿಗೆ ನಿಯಮಿತವಾಗಿ ಸರಿಯಾದ ತರಬೇತಿ ಮತ್ತು ಕಾರ್ಯಗಳನ್ನು ಒದಗಿಸಬೇಕು.
  3. ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು ಅದು ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಹಾಯ ಮಾಡುತ್ತದೆ.
  4. ನ್ಯಾಯಾಧೀಶರು ಹೊಂದಿರುವ ವಿಶೇಷ ಜ್ಞಾನದ ಆಧಾರದ ಮೇಲೆ ಪ್ರಕರಣಗಳನ್ನು ನಿಯೋಜಿಸಬೇಕು.
  5. ಸಾಧ್ಯವಾದಲ್ಲೆಲ್ಲಾ ಮಧ್ಯಸ್ಥಿಕೆಗೆ ಅವಕಾಶ ನೀಡಬೇಕು ಮತ್ತು ನಿರ್ದಿಷ್ಟವಾಗಿ ಚಿಕ್ಕ-ಪುಟ್ಟ ಮತ್ತು ಗಂಭೀರ ಸ್ವರೂಪದ್ದಲ್ಲದ ಪ್ರಕರಣಗಳ ಸಂದರ್ಭಗಳಲ್ಲಿ ಮಧ್ಯಸ್ಥಿಕೆಯನ್ನು ಕಡ್ಡಾಯಗೊಳಿಸಬೇಕು.
  6. ಚಿಕ್ಕ-ಪುಟ್ಟ ಪ್ರಕರಣಗಳನ್ನು ವಿಲೇವಾರಿ ಮಾಡಲು ನ್ಯಾಯ ಪಂಚಾಯಿತಿಗಳಿಗೆ ಅಧಿಕಾರ ನೀಡಬೇಕು.
  7. ಪ್ರಕರಣಗಳ ಮುಂದೂಡುವಿಕೆಯ ವಿಧಾನವನ್ನು ಒಂದು ಮಿತಿಗೆ ಉಳಿಸುವ ಮೂಲಕ ರೀತಿಯಲ್ಲಿ ಮಾರ್ಪಡಿಸಬೇಕು ಮತ್ತು ಕ್ಷುಲ್ಲಕ ಕಾರಣಗಳ ಆಧಾರದ ಮೇಲೆ ಪ್ರಕರಣಗಳ ಮುಂದೂಡಿಕೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಗೆ ದಂಡ ವಿಧಿಸಬೇಕು.
  8. ವಿಜ್ಞಾನ ಕ್ಷೇತ್ರದಲ್ಲಿ ಮನುಷ್ಯ ಮಾಡಿದ ತಾಂತ್ರಿಕ ಅಭಿವೃದ್ಧಿ ಈ ಉದ್ದೇಶವನ್ನು ಸಾಕಾರಗೊಳಿಸಲು ಹೆಚ್ಚು ಉಪಯುಕ್ತವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನ್ಯೂ ಶೆಫರ್ಡ್ ರಾಕೆಟ್ ವ್ಯವಸ್ಥೆ ಎಂದರೇನು?


(What is the New Shephard rocket system?)

 ಸಂದರ್ಭ:

ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೋಸ್‌, ತಮ್ಮದೇ ಕಂಪನಿಯ ‘ಬ್ಲೂ ಒರಿಜಿನ್’ (Blue Origin) ಗಗನ ನೌಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಹತ್ತು ನಿಮಿಷಗಳ ಬಾಹ್ಯಾಕಾಶ ಪ್ರಯಾಣ ಕೈಗೊಂಡು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಈ ಮೂಲಕ ಅಂತರಿಕ್ಷಕ್ಕೆ ಪ್ರಯಾಣಿಸಿದ ಎರಡನೇ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಬೆಜೋಸ್‌ ಅವರೊಂದಿಗೆ ಅವರ ಸಹೋದರ ಮಾರ್ಕ್ ಬೆಜೋಸ್‌, ನೆದರ್ಲ್ಯಾಂಡ್ಸ್ ನ 18 ವರ್ಷದ ಯುವಕ ಒಲಿವರ್ ಡೆಮನ್, ಮತ್ತು ಟೆಕ್ಸಾಸ್ ನ 82 ವರ್ಷದ ಹಿರಿಯ ವ್ಯಕ್ತಿಯು ಸೇರಿದಂತೆ ಆಯ್ದ ಪ್ರಯಾಣಿಕರು ಪ್ರಯಾಣಿಸಿದ್ದರು.

 

ಜುಲೈ 20 ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್  ಚಂದ್ರನ ಮೇಲೆ ಇಳಿದ 52 ನೇ ವಾರ್ಷಿಕೋತ್ಸವವನ್ನು (ಅಪೋಲೋ 11 ಚಂದ್ರಯಾನದ 52ನೇ ವರ್ಷಾಚರಣೆ) ಸಹ ಸೂಚಿಸುತ್ತದೆ.  

  

ಕಾರ್ಯಾಚರಣೆಯ ಮಹತ್ವ:

ಗಗನಯಾತ್ರಿಗಳು ಮೂರರಿಂದ ನಾಲ್ಕು ನಿಮಿಷಗಳ ಶೂನ್ಯ-ಗುರುತ್ವ ವನ್ನು ಅನುಭವಿಸಿದರು ಮತ್ತು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾದ ಕಾರ್ಮನ್ ರೇಖೆಯ (the Kármán Line) ಮೇಲೆ ಪ್ರಯಾಣಿಸಿದರು.

 

ಏನಿದು ನ್ಯೂ ಶೆಫರ್ಡ್, ರಾಕೆಟ್ ವ್ಯವಸ್ಥೆ?

  1. ಇದು, ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕರೆದೊಯ್ಯುವ ರಾಕೆಟ್ ವ್ಯವಸ್ಥೆಯಾಗಿದೆ.
  2. ಈ ವ್ಯವಸ್ಥೆಯನ್ನು ‘ಬ್ಲೂ ಒರಿಜಿನ್’ ನಿರ್ಮಿಸಿದೆ.
  3. ‘ನ್ಯೂ ​​ಶೆಫರ್ಡ್’ ಗೆ ಬಾಹ್ಯಾಕಾಶಕ್ಕೆ ಹೋದ ಅಮೆರಿಕದ ಮೊದಲ ಗಗನಯಾತ್ರಿ ಅಲನ್ ಶೆಫರ್ಡ್ ಅವರ ಹೆಸರನ್ನು ಇಡಲಾಗಿದೆ.
  4. ಇದು ಬಾಹ್ಯಾಕಾಶದಲ್ಲಿ ಹಾರಲು ಮತ್ತು ಭೂಮಿಯಿಂದ 100 ಕಿ.ಮೀ ಗಿಂತ ಹೆಚ್ಚು ದೂರದಲ್ಲಿ ಬಾಹ್ಯಾಕಾಶ ಉಪಕರಣಗಳ ಪೇಲೋಡ್‌ಗಳನ್ನು (Payloads) ಸಾಗಿಸಲು ಸೌಲಭ್ಯವನ್ನು ಒದಗಿಸುತ್ತದೆ.
  5. ‘ನ್ಯೂ ​​ಶೆಫರ್ಡ್’ ಸಂಪೂರ್ಣ ಮರುಬಳಕೆ ಮಾಡಬಹುದಾದ, ಲಂಬವಾದ ಟೇಕ್-ಆಫ್ ಮತ್ತು ಲಂಬವಾದ ಲ್ಯಾಂಡಿಂಗ್(vertical takeoff and vertical landing space vehicle) ಬಾಹ್ಯಾಕಾಶ ವಾಹನವಾಗಿದೆ.

 

ಈ ಕಾರ್ಯಾಚರಣೆಯ ವೈಜ್ಞಾನಿಕ ಉದ್ದೇಶಗಳು:

ಗಗನಯಾತ್ರಿಗಳು ಮತ್ತು ಸಂಶೋಧನೆ-ಸಂಬಂಧಿತ ಬಾಹ್ಯಾಕಾಶ ಉಪಕರಣಗಳನ್ನು ಕ್ರೆಮನ್ ರೇಖೆಯನ್ನು ಮೀರಿ ಸಾಗಿಸಲು ಈ ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ‘ಕಾರ್ಮನ್ ಲೈನ್’(Karman line) ಎನ್ನುವುದು ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾಗಿದೆ.

  1. ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಉದ್ದೇಶವು ಶೈಕ್ಷಣಿಕ ಸಂಶೋಧನೆ, ಸಾಂಸ್ಥಿಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ಇತರ ಉದ್ಯಮಶೀಲ ಉದ್ಯಮಗಳಿಗೆ ಸ್ಥಳಾವಕಾಶಕ್ಕೆ ಸುಗಮ ಮತ್ತು ವೆಚ್ಚ-ಪರಿಣಾಮಕಾರಿ ಪ್ರವೇಶವನ್ನು ಒದಗಿಸುವುದು.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ರಾಷ್ಟ್ರೀಯ ಭದ್ರತಾ ಕಾಯ್ದೆ (NSA),1980:


(National Security Act (NSA), 1980)

ಸಂದರ್ಭ:

ಮಣಿಪುರ ರಾಜ್ಯ ಬಿಜೆಪಿ ಅಧ್ಯಕ್ಷ ಟಿಕೇಂದ್ರ ಸಿಂಗ್‌ ಅವರು ಕೋವಿಡ್‌ 19 ಸಾಂಕ್ರಾಮಿಕದಿಂದ ಮೃತಪಟ್ಟ ನಂತರ ಹಸುವಿನ ಸಗಣಿ ಮತ್ತು ಗಂಜಲದಿಂದ ಕೋವಿಡ್‌ ಗುಣವಾಗದು ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೆ ಪ್ರಕಟಿಸಿ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾದ ಮಣಿಪುರದ ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

‘ಅರ್ಜಿದಾರನನ್ನು ನಿರಂತರ ಬಂಧಿಸಿಡುವುದರಿಂದ ಅವರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ನ್ಯಾಯಾಲಯದ ಮಧ್ಯಂತರ ಆದೇಶದಂತೆ ನಾವು ಅವರ ಬಿಡುಗಡೆಗೆ ಕೂಡಲೇ ನಿರ್ದೇಶಿಸುತ್ತೇವೆ  ಹಾಗೂ ಈ ವ್ಯಕ್ತಿಯ ಬಂಧನವನ್ನು ಇನ್ನು ಒಂದು ದಿನಕ್ಕೂ ಮುಂದುವರಿಸಲು ನಾವು ಅನುಮತಿಸುವುದಿಲ್ಲ’ ಎಂದು ನ್ಯಾಯಪೀಠವು ಖಡಕ್‌ ಆಗಿ  ಹೇಳಿದೆ.

 

ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಕುರಿತು:

‘ರಾಷ್ಟ್ರೀಯ ಭದ್ರತಾ ಕಾಯ್ದೆ’ NSA ಒಂದು ತಡೆಗಟ್ಟುವ ಬಂಧನ ಕಾನೂನು ಆಗಿದೆ.

ತಡೆಗಟ್ಟುವ ಬಂಧನವು (preventive detention) ವ್ಯಕ್ತಿಯನ್ನು ಭವಿಷ್ಯದಲ್ಲಿ ಅಪರಾಧ ಮಾಡುವುದನ್ನು ತಡೆಯಲು ಮತ್ತು / ಅಥವಾ ಭವಿಷ್ಯದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಬಂಧನ (ಜೈಲುವಾಸ) ವನ್ನು ಒಳಗೊಂಡಿರುತ್ತದೆ.

 

ಸಂವಿಧಾನದ 22 (3) (ಬಿ) ವಿಧಿಯು, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಕಾರಣಗಳಿಗಾಗಿ ತಡೆಗಟ್ಟುವ ಬಂಧನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ವಿಧಿಸಲು ಅನುಮತಿಸುತ್ತದೆ.

 

ಸಂವಿಧಾನದ ವಿಧಿ 22 (4) ಪ್ರಕಾರ:

ತಡೆಗಟ್ಟುವ ಬಂಧನಕ್ಕೆ ಯಾವುದೇ ಕಾನೂನು ಆಧಾರ ಒದಗಿಸದ ಹೊರತು ಯಾವುದೇ ವ್ಯಕ್ತಿಯನ್ನು ಮೂರು ತಿಂಗಳು ಮೀರಿದ ಅವಧಿಗೆ ಬಂಧಿಸಲು ಅಧಿಕಾರ ನೀಡುವುದಿಲ್ಲ. ಹೊರತು

  1. ಮೂರು ತಿಂಗಳ ಅವಧಿಯನ್ನು ಮೀರಿ ಬಂಧನವನ್ನು ವಿಸ್ತರಿಸಲು ಸಲಹಾ ಮಂಡಳಿಯು ಸಾಕಷ್ಟು ಕಾರಣಗಳನ್ನು ವರದಿ ಮಾಡಬೇಕಾಗುತ್ತದೆ.

1978 ರ 44 ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, ‘ಸಲಹಾ ಮಂಡಳಿಯ’ ಅಭಿಪ್ರಾಯವನ್ನು ಪಡೆಯದೆ ಬಂಧನದ ಅವಧಿಯನ್ನು ಮೂರು ತಿಂಗಳಿಂದ ಎರಡು ತಿಂಗಳಿಗೆ ಇಳಿಸಲಾಗಿದೆ. ಆದಾಗ್ಯೂ, ಈ ನಿಬಂಧನೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲ, ಆದ್ದರಿಂದ, ಮೂರು ತಿಂಗಳ ಮೂಲ ಅವಧಿಯ ಅವಕಾಶ ಇನ್ನೂ ಜಾರಿಯಲ್ಲಿದೆ.

 

ಬಂಧನದ ಅವಧಿ:

  1. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವ್ಯಕ್ತಿಯನ್ನು 12 ತಿಂಗಳವರೆಗೆ ಯಾವುದೇ ಆಧಾರವಿಲ್ಲದೆ ಬಂಧಿಸಬಹುದು. ಆದರೆ ಸರ್ಕಾರವು ಕೆಲವು ಹೊಸ ಪುರಾವೆಗಳನ್ನು ಪಡೆದುಕೊಂಡರೆ, ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು.
  2. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ, ಬಂಧನಕ್ಕೊಳಗಾದ ವ್ಯಕ್ತಿಯನ್ನು ತನ್ನ ವಿರುದ್ಧದ ಆರೋಪಗಳನ್ನು ಹೇಳದೆ 10 ದಿನಗಳ ಕಾಲ ಬಂಧಿಸಬಹುದು. ಬಂಧಿತ ವ್ಯಕ್ತಿಯು ಹೈಕೋರ್ಟ್‌ನ ಸಲಹಾ ಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು ಆದರೆ ವಿಚಾರಣೆಯ ಸಮಯದಲ್ಲಿ ಅವನಿಗೆ ವಕೀಲರ ಸಹಾಯವನ್ನು ಪಡೆಯಲು ಅನುಮತಿ ಇಲ್ಲ.

 

ಈ ಕಾನೂನಿನ ದುರುಪಯೋಗದ ಬಗ್ಗೆ ಕಳವಳಗಳು:

  1. ಭಾರತೀಯ ಸಂವಿಧಾನದ 22 (1) ನೇ ವಿಧಿಯ ಪ್ರಕಾರ, ಬಂಧಿಸಲ್ಪಟ್ಟ ಯಾವುದೇ ವ್ಯಕ್ತಿಯು ಸಮಾಲೋಚಿಸುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಅಥವಾ ಆತನ ಸಮಾಲೋಚಿಸುವ ಹಕ್ಕನ್ನು ನಿರಾಕರಿಸುವಂತಿಲ್ಲ ಮತ್ತು ಅವನ ಆಸಕ್ತಿಯ ವಕೀಲರಿಂದ ರಕ್ಷಿಸಲ್ಪಡುತ್ತಾನೆ.
  2. ಅಪರಾಧ ದಂಡ ಪ್ರಕ್ರಿಯೆ ಸಂಹಿತೆ (CRPC) ಯ ಸೆಕ್ಷನ್ 50 ರ ಪ್ರಕಾರ, ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಗೆ ಆತನನ್ನು ಯಾವ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ತಿಳಿಸಬೇಕು ಮತ್ತು ಆತನಿಗೆ ಜಾಮೀನು ಪಡೆಯುವ ಹಕ್ಕಿದೆ.

 

ಆದಾಗ್ಯೂ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ, ಬಂಧನಕ್ಕೊಳಗಾದ ವ್ಯಕ್ತಿಗೆ ಈ ಯಾವುದೇ ಹಕ್ಕುಗಳು  ಲಭ್ಯವಿಲ್ಲ. ಈ ಕಾನೂನಿನಡಿಯಲ್ಲಿ, ಸರ್ಕಾರವು ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೆಂದು ಪರಿಗಣಿಸಿದರೆ ಮಾಹಿತಿಯನ್ನು ತಡೆಹಿಡಿಯುವ ಅಥವಾ ಮರೆಮಾಚುವ ಹಕ್ಕನ್ನು ಸರ್ಕಾರ ಹೊಂದಿದೆ.  

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸ್ವಿಸ್ ಆಲ್ಪ್ಸ್ ನಲ್ಲಿ 1,000 ಕ್ಕೂ ಹೆಚ್ಚು ಸರೋವರಗಳನ್ನು ಸೃಷ್ಟಿಸಿದ ಹವಾಮಾನ ಬದಲಾವಣೆ:

(Climate change has added over 1,000 lakes in Swiss Alps)

  1.  ಸ್ವಿಸ್ ಆಲ್ಪ್ಸ್ ನಲ್ಲಿ ಹಿಮನದಿಗಳ ಕರಗುವಿಕೆಯಿಂದಾಗಿ ಪರ್ವತದಾದ್ಯಂತ 1,000 ಕ್ಕೂ ಹೆಚ್ಚು ಹೊಸ ಸರೋವರಗಳು ಸೃಷ್ಟಿಯಾಗಿವೆ.
  2. ತ್ವರಿತ ಹವಾಮಾನ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣ.
  3. 1850 ರ ಸುಮಾರಿಗೆ ಪುಟ್ಟ ಹಿಮಯುಗದ ಅಂತ್ಯದ ವೇಳೆಗೆ ಸ್ವಿಸ್ ಆಲ್ಪ್ಸ್ ನ ಹಿಮನದಿಯ ಪ್ರದೇಶಗಳಲ್ಲಿ ಸುಮಾರು 1,200 ಹೊಸ ಸರೋವರಗಳು ರೂಪುಗೊಂಡಿವೆ. ಅವುಗಳಲ್ಲಿ ಸುಮಾರು 1,000 ಸರೋವರಗಳು ಇಂದಿಗೂ ಅಸ್ತಿತ್ವದಲ್ಲಿವೆ.

ಲಿಟಲ್ ಐಸ್ ಏಜ್ (Little Ice Age -LIA) ಎನ್ನುವುದು, 14 ನೇ ಶತಮಾನದ ಆರಂಭದಿಂದ 19 ನೇ ಶತಮಾನದ ಮಧ್ಯದವರೆಗೆ ಸಂಭವಿಸಿದ ಹವಾಮಾನ ಮಧ್ಯಂತರವಾಗಿದೆ.

  1. ಪುಟ್ಟ ಹಿಮಯುಗದ (Little Ice Age -LIA) ಏಳು ಸಂಭವನೀಯ ಕಾರಣಗಳನ್ನು ವಿಜ್ಞಾನಿಗಳು ತಾತ್ಕಾಲಿಕವಾಗಿ ಗುರುತಿಸಿದ್ದಾರೆ: ಕಕ್ಷೀಯ ಚಕ್ರಗಳು; ಕಡಿಮೆಯಾದ ಸೌರ ಚಟುವಟಿಕೆ; ಹೆಚ್ಚಿದ ಜ್ವಾಲಾಮುಖಿ ಚಟುವಟಿಕೆ; ಬದಲಾದ ಸಾಗರ ಪ್ರವಾಹ ಹರಿವುಗಳು; ಪ್ರಪಂಚದ ವಿವಿಧ ಭಾಗಗಳಲ್ಲಿನ ಮಾನವ ಜನಸಂಖ್ಯೆಯಲ್ಲಿನ ಏರಿಳಿತಗಳಿಂದಾದ ಮರು ಅರಣ್ಯೀಕರಣ ಅಥವಾ ಅರಣ್ಯ ನಾಶ; ಮತ್ತು ಜಾಗತಿಕ ಹವಾಮಾನದ ಅಂತರ್ಗತ ವ್ಯತ್ಯಾಸ.

 

ರಾಷ್ಟ್ರೀಯ ಲಾಜಿಸ್ಟಿಕ್ಸ್ ಎಕ್ಸಲೆನ್ಸ್ ಪ್ರಶಸ್ತಿಗಳು:

(National Logistics Excellence Awards)

  1.  ಹೊಸದಾಗಿ ಪ್ರಾರಂಭಿಸಲಾದ ಈ ಪ್ರಶಸ್ತಿಗಳು ದೇಶದ ಲಾಜಿಸ್ಟಿಕ್ಸ್ ಪೂರೈಕೆ ಸರಪಳಿಯಲ್ಲಿ ತೊಡಗಿರುವ ವಿವಿಧ ಸರಕು ಸಾಗಣೆ ಉದ್ಯಮಿಗಳಿಗೆ ಸರಿಯಾದ ಮಾನ್ಯತೆಯನ್ನು ನೀಡಲಿದೆ.
  2. ಪ್ರಶಸ್ತಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಸೇವಾ ಪೂರೈಕೆದಾರರು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಒಳಗೊಂಡಿದೆ ಮತ್ತು ಎರಡನೇ ವರ್ಗವನ್ನು ವಿವಿಧ ಬಳಕೆದಾರ ಕೈಗಾರಿಕೆಗಳಿಗೆ ನೀಡಲಾಗುತ್ತದೆ.
  3. ಈ ಪ್ರಶಸ್ತಿಗಳು ಪ್ರಕ್ರಿಯೆಯ ಪ್ರಮಾಣೀಕರಣ, ಬಲವರ್ಧನೆ, ಡಿಜಿಟಲ್ ರೂಪಾಂತರಗಳು, ತಾಂತ್ರಿಕ ನವೀಕರಣ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಒಳಗೊಂಡಿರುವ ಅತ್ಯುತ್ತಮ ಅಭ್ಯಾಸಗಳನ್ನು ಎತ್ತಿ ತೋರಿಸುತ್ತವೆ.

 

ಡೈರಿ ಇನ್ವೆಸ್ಟ್ಮೆಂಟ್ ಆಕ್ಸಿಲರೇಟರ್:

(Dairy Investment Accelerator)

  1.  ಇದನ್ನು, ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (DAHD) ತನ್ನ ಹೂಡಿಕೆ ಸೌಲಭ್ಯ ಘಟಕದ ಅಡಿಯಲ್ಲಿ ಸ್ಥಾಪಿಸಿದೆ.
  2. ಭಾರತೀಯ ಡೈರಿ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಮೀಸಲಾದ ಗಮನವನ್ನು ಹರಿಸುವುದು ಇದರ ಉದ್ದೇಶ.
  3. ಇದು ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) ಬಗ್ಗೆ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುತ್ತದೆ.

ಇದು ಹೂಡಿಕೆ ಪ್ರಕ್ರಿಯೆಯಾದ್ಯಂತ ಬೆಂಬಲವನ್ನು ಒದಗಿಸುತ್ತದೆ:

  1. ಹೂಡಿಕೆ ಅವಕಾಶಗಳ ಮೌಲ್ಯಮಾಪನಕ್ಕಾಗಿ ನಿರ್ದಿಷ್ಟ ಒಳಹರಿವು ನೀಡಲಾಗುತ್ತಿದೆ.
  2. ಕಾರ್ಯತಂತ್ರದ ಪಾಲುದಾರರೊಂದಿಗೆ ಸಂಪರ್ಕ ಸಾಧಿಸುವುದು.
  3. ರಾಜ್ಯ ಇಲಾಖೆಗಳು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಆನ್ ಗ್ರೌಂಡ್ ನೆರವು ನೀಡುವುದು.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

Leave a Comment